ಬೇತಮಂಗಲ ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳತನದ ಆರೋಪಿ ಸೆರೆ, 3 ದ್ವಿಚಕ್ರ ವಾಹನಗಳ ವಶ

ಕೆಜಿಎಫ್, ಜ.13: ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.1,65,000/- ಬೆಲೆ ಬಾಳುವ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಜ. 10 ರಂದು ಮುಳಬಾಗಿಲು ತಾಲ್ಲೂಕಿನ ಸನಸನಹಳ್ಳಿ ವಾಸಿ ಆಂಜನೇಯಲು ಅವರು ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದಂತಹ ತನ್ನ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ನೇತೃತ್ವದಲ್ಲಿ ಪಿಎಸ್ಐ ಗುರುರಾಜ ಚಿಂತಾಕಲ ಮತ್ತು ಅವರ ತಂಡದವರು ಆಂದ್ರಪ್ರದೇಶ ರಾಜ್ಯದ ಪಲಮನೇರ್ ತಾಲ್ಲೂಕಿನ ವಾಸಿ ಚಂದ್ರಾಚಾರಿ (37ವರ್ಷ) ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೇತಮಂಗಲ ಮತ್ತು ಆಂದ್ರಪ್ರದೇಶದ ಬೈರಡ್ಲಪಲ್ಲಿ, ಶಾಂತಿಪುರಂ ಕಡೆಗಳಲ್ಲಿ 03 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿ ಚಂದ್ರಾಚಾರಿ ಕಡೆಯಿಂದ ಸುಮಾರು ರೂ.1,65,000/- ಮೌಲ್ಯದ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.
ಡಿವೈಎಸ್ಪಿ ಎಸ್.ಪಾಂಡುರಂಗ, ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬೇತಮಂಗಲ ಪಿಎಸ್ಐ ಗುರುರಾಜ ಚಿಂತಾಕಲ, ಸಿಬ್ಬಂದಿಗಳಾದ ಆರ್.ಗಜೇಂದ್ರ, ಶ್ರೀನಿವಾಸ, ಕೃಷ್ಣಮೂರ್ತಿ, ಸತೀಶ್ ರೆಡ್ಡಿ, ಗಜೇಂದ್ರ ಮತ್ತು ಜೀಪ್ ಚಾಲಕ ಮುರುಳಿ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.
ಚಿತ್ರ ಶೀರ್ಷಿಕೆ: 13ಕೆಜಿಎಫ್01: ವಶಪಡಿಸಿಕೊಂಡ 03 ದ್ವಿಚಕ್ರ ವಾಹನಗಳೊಂದಿಗೆ ಬೇತಮಂಗಲ ಪೊಲೀಸರು