ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಉದ್ಘಾಟನೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕಂಪನಿ, ಬ್ಯಾಂಕುಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ ಏರ್ಪಡಿಸಿರುವ 3 ದಿನಗಳವಧಿಯ ಸೌಹಾರ್ದ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿಸಿಎಲ್)ಗೆ ಶುಕ್ರವಾರ ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಟ್ರೋಪಿ ಅನಾವರಣಗೊಳಿಸಿ ಮೊದಲ ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು.
ಕೋವಿಡ್ ಕಾರಣದಿಂದ ಕಳೆದ 2 ವರ್ಷದಿಂದ ಹೆಚ್ಚಿನವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಪ್ರಸ್ತುತ ಒಂದು ಅವಕಾಶವನ್ನು ಕಸ್ತೂರ್ಬಾ ಆಸ್ಪತ್ರೆ ಮಾಡಿಕೊಟ್ಟಿದೆ. ಮಾಹೆ ಮಣಿಪಾಲ ಯಾವಾಗಲೂ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ. ಕೆಲವೇ ಕೆಲವು ವಿಶ್ವವಿದ್ಯಾನಿಲಯಗಳು ಇನ್ ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಗಾಗಿ ಭಾರತ ಸರಕಾರದಿಂದ ಗುರುತಿಸಲ್ಪಟ್ಟಿವೆ. ಅವುಗಳಲ್ಲಿ ಮಾಹೆ ಮಣಿಪಾಲವೂ ಒಂದಾಗಿದೆ ಎಂದರು.
ಮಾಹೆ ಮಣಿಪಾಲ ಉಪ ಕುಲಪತಿ ಲೆ| ಜ| ಡಾ. ಎಂ ಡಿ ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗ ಸಹ ಕುಲಪತಿ ಡಾ. ಪಿ.ಎಲ್.ಎನ್.ಜಿ ರಾವ್, ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿಒಒ ಸಿ. ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್ ಇದ್ದರು.
ಕ್ರಿಕೆಟ್ ಟೂರ್ನಮೆಂಟ್ ಡಿ. 19ರ ವರೆಗೆ ಮಣಿಪಾಲ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆಯಲಿದೆ.
ಸುಮಾರು 21 ತಂಡಗಳು ಭಾಗವಹಿಸಲಿವೆ.
ಡಿ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು