ಉಡುಪಿ: ಪತ್ರಕರ್ತ, ಕಲಾಮಿಮರ್ಶಕರಾಗಿದ್ದ ದಿ| ಎ. ಈಶ್ವರಯ್ಯ ಅವರ ಸಂಸ್ಮರಣಾ ಗ್ರಂಥ ಈಶ್ವರಾರ್ಪಣವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಈಚೆಗೆ ಅನಾವರಣಗೊಳಿಸಿದರು.
ಸಾತ್ವಿಕರೂ ವಿದ್ವಾಂಸರೂ ಆಗಿದ್ದ ಈಶ್ವರಯ್ಯ ಅವರು ಸಂಗೀತ, ಯಕ್ಷಗಾನ, ಛಾಯಾಚಿತ್ರಗ್ರಹಣ, ಆಧುನಿಕ ವಿಜ್ಞಾನ, ತಾಂತ್ರಿಕತೆ ಮೊದಲಾದ ಹಲವಾರು ಕಲಾಪ್ರಕಾರಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಧರ್ಮಸ್ಥಳ ಕ್ಷೇತ್ರದ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿರುವ ಕ್ಯಾಮೆರಾಗಳ ಬಗ್ಗೆ ಖರಾರುವಾಕ್ಕಾದ ಮಾಹಿತಿ ಒದಗಿಸಿಕೊಟ್ಟಿದ್ದರು. ಸಮಾಜ ಯಾವತ್ತೂ ಅವರನ್ನು ಮರೆಯಬಾರದು. ಅವರ ಸಾಮರ್ಥ್ಯ ಬಿಂಬಿಸುವ ನಿಟ್ಟಿನಲ್ಲಿ ಈ ಪುಸ್ತಕ ಉತ್ತಮ ದಾಖಲೆಯಾಗಲಿದೆ ಎಂದರು.
ಗ್ರಂಥದ ಕುರಿತು ಸಂಪಾದಕ ಪ್ರೊ. ವಿ. ಅರವಿಂದ ಹೆಬ್ಬಾರ್ ವಿವರ ನೀಡಿದರು. ಪುಸ್ತಕ ಮುದ್ರಣಕ್ಕೆ ಸಹಕರಿಸಿದ ರಾಧಿಕಾ ಶಂಕರನಾರಾಯಣ ದಂಪತಿಯನ್ನು ಡಾ| ಹೆಗ್ಗಡೆ ಗೌರವಿಸಿದರು.
ಉಡುಪಿ ರಾಗಧನ ಅಧ್ಯಕ್ಷ ಡಾ. ಶ್ರೀಕಿರಣ್ ಹೆಬ್ಬಾರ್, ಕಾರ್ಯದರ್ಶಿ ಉಮಾಶಂಕರಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಮಂಗಳೂರು ಮಣಿಕೃಷ್ಣಸ್ವಾಮಿ ಅಕಾಡೆಮಿಯ ಪಿ. ನಿತ್ಯಾನಂದ ರಾವ್ ಮತ್ತು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ. ವಿ. ಶೆಟ್ಟಿ ಇದ್ದರು.
ಸಮನ್ವಿ ಪ್ರಾರ್ಥಿಸಿದರು