ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಗೆ ಕರ್ಗಲ್ಲು ಆಯ್ಕೆ
(ಸುದ್ದಿಕಿರಣ ವರದಿ)
ಉಡುಪಿ: ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ ನೀಡುವ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟಿನ ಕುಣಿತದ ಸೂಕ್ಷ್ಮವನ್ನು ಬಲ್ಲ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತನ್ನ ಶಿಷ್ಯರಿಗೆ ಧಾರೆ ಎರೆಯುತ್ತಿರುವ ಕರ್ಗಲ್ಲು, 12 ವರ್ಷ ಕಾಲ ಮೇಳದ ತಿರುಗಾಟ ಮಾಡಿ 1986ರಿಂದ ಯಕ್ಷಗಾನ ಅಧ್ಯಯನ, ಅಧ್ಯಾಪನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಪ್ರಶಸ್ತಿ 40 ಸಾವಿರ ರೂ. ನಗದು, ಪ್ರಶಸ್ತಿಪತ್ರ ಮತ್ತು ಸನ್ಮಾನ ಒಳಗೊಂಡಿದೆ.
ಈ ತಿಂಗಳ 26ರಂದು ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಕೃಷ್ಣ ಮಠ ರಾಜಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.