ಅಮೆರಿಕಾದಲ್ಲಿ ದೀಪಾವಳಿ ಆಚರಣೆ
ಉಡುಪಿ, ನ, 4 (ಸುದ್ದಿಕಿರಣ ವರದಿ): ದೀಪಾವಳಿ ಹಬ್ಬವನ್ನು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಮೆರಿಕಾ ಸ್ಯಾನ್ ಝೋನ್ ನಲ್ಲಿರುವ ಪುತ್ತಿಗೆ ಶಾಖಾಮಠ ಶ್ರೀಕೃಷ್ಣ ವೃಂದಾವನದಲ್ಲಿ ಸಾಂಪ್ರದಾಯಿಕ ಸಡಗರದಿಂದ ಆಚರಿಸಲಾಯಿತು.
ನರಕ ಚತುರ್ದಶಿ ಸಂದರ್ಭದಲ್ಲಿ ಎಣ್ಣೆಶಾಸ್ತ್ರ, ತೈಲಾಭ್ಯಂಗ ನಡೆಸಲಾಯಿತು.
ಆರೋಗ್ಯ ವೃದ್ಧಿ
ಮಹಾಲಕ್ಷ್ಮಿಯ ದಿವ್ಯ ಸನ್ನಿಧಾನವಿರುವ ತೈಲಾಭ್ಯಂಗ ಆರೋಗ್ಯದ ಅಭಿವೃದ್ಧಿಗೆ ಪೂರಕ. ನರಕಾಸುರನನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸಿದ ಶ್ರೀಕೃಷ್ಣನ ಸಂಪ್ರೀತಿಗಾಗಿ ದೀಪಾವಳಿ ಸಂದರ್ಭದ ಚತುರ್ದಶಿಯಂದು ಎಲ್ಲರೂ ತಪ್ಪದೇ ತೈಲಾಭ್ಯಂಜನ ಮಾಡಬೇಕು. ಹಿರಿಯರಿಂದ ಆಶೀರ್ವಾದದ ರೂಪದಲ್ಲಿ ತೈಲವನ್ನು ಹಚ್ಚಿಸಿಕೊಳ್ಳಬೇಕು ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ದೀಪಾವಳಿ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ತೈಲ ಹಚ್ಚಿ, ವಿಶೇಷವಾಗಿ ಮಕ್ಕಳಿಗೂ ತೈಲ ಹಚ್ಚಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾಗವಹಿಸಿ ಶ್ರೀಪಾದರ ಅನುಗ್ರಹ ಪಡೆದರು ಎಂದು ಪುತ್ತಿಗೆ ಮಠ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.