ಸುದ್ದಿಕಿರಣ ವರದಿ
ಶನಿವಾರ, ಜುಲೈ 16
ಜೀವನದಲ್ಲಿ ಆಧ್ಯಾತ್ಮಿಕ ತತ್ವ ಅಳವಡಿಸಿಕೊಳ್ಳಲು ಸಲಹೆ
ಉಡುಪಿ: ಜೀವನದಲ್ಲಿ ಆಧ್ಯಾತ್ಮಿಕ ತತ್ವ ಅಳವಡಿಸಿಕೊಳ್ಳಬೇಕು. ಅದರಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪೊಳಲಿ ಶ್ರೀರಾಮಕೃಷ್ಣ ತಪೋವನದ ಸ್ವಾಮಿ ಶ್ರೀ ವಿವೇಕ ಚೈತನ್ಯಾನಂದಜೀ ಸಲಹೆ ನೀಡಿದರು.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ.) ಆಯುರ್ವೇದ ಕಾಲೇಜಿನಲ್ಲಿ ನಡೆದ 23ನೇ ವರ್ಷದ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದರ್ಶ ವ್ಯಕ್ತಿಗಳಾದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮೊದಲಾದವರ ಜೀವನಶೈಲಿ ಹಾಗೂ ತತ್ವಗಳನ್ನು ಪಾಲಿಸುವಂತೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿ ನೂತನ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ಉನ್ನತ ಶಿಕ್ಷಣದ ಮಹತ್ವ ತಿಳಿಸಿದರು. ಕಾಲೇಜಿನ ಎಲ್ಲಾ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ವೈದ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.
ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜು ಪ್ರಾಂಶುಪಾಲೆ ಡಾ| ಮಮತಾ ಕೆ. ವಿ., ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಉಪನಯನ ಸಂಸ್ಕಾರದಿಂದ ವಿದ್ಯಾರ್ಥಿಗಳ ಮೌಲ್ಯವರ್ಧನೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕ ಡಾ. ಪದ್ಮಕಿರಣ್ ಸಿ. ವಿರಚಿತ ಪಂಚಕರ್ಮ ಕುರಿತ ಪುಸ್ತಕ ಅನಾವರಣಗೊಳಿಸಲಾಯಿತು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕಗೊಂಡ ಡಾ| ಸತೀಶ್ಚಂದ್ರ ಎಸ್. ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವೀಂದ್ರ ಅಂಗಡಿ ಸಂದೇಶ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಪ್ರತಿಜ್ಞಾ ಬೋಧನೆ ಮಾಡಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ವಂದಿಸಿದರು.
ಸ್ನಾತಕೋತ್ತರ ವಿಭಾಗದ ಉಪ ಮುಖ್ಯಸ್ಥೆ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಚೈತ್ರಾ ಹೆಬ್ಬಾರ್ ಇದ್ದರು. ಸಂಹಿತ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಹಾಲಕ್ಷ್ಮಿ ನಿರೂಪಿಸಿದರು.
ಅದಕ್ಕೂ ಮುನ್ನ ಧನ್ವಂತರಿ ಹೋಮ ನಡೆಯಿತು. ಬಳಿಕ ಪೋಷಕರ ಸಭೆ ನಡೆಸಲಾಯಿತು