ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನದಂದು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಯೋಗ ಪ್ರದರ್ಶನ ಮೆರೆಸಲಾಯಿತು. ದ.ಕ. ಜಿಲ್ಲೆಯ ಪುತ್ತೂರಿನ ಯೋಗ ಗುರು ರಾಜೇಂದ್ರ ಎಂಕಮೂಲೆ ನೇತೃತ್ವದಲ್ಲಿ ವಾಸುದೇವ ಕ್ರಿಯಾ ಯೋಗ ಮಾಡಿಸಲಾಯಿತು.
ವಾಸುದೇವ ಕ್ರಿಯಾ ಯೋಗ ಸ್ಥಾಪಕ ರಾಜೇಂದ್ರ ಎಂಕಮೂಲೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಮಂತ್ರಿಗಳಾದ ಜೇಸನ್ ವುಡ್ ಎಂ.ಪಿ. ಮತ್ತು ಮೈಕಲ್ ಸಕ್ಕರ್, ಸಂಸದರು ಹಾಗೂ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭಾಗವಹಿಸಿ ಯೋಗಾಸನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಂದ್ರ ಎಂಕಮೂಲೆ, ಜಗತ್ತಿನ ಸ್ವಾಸ್ಥ್ಯ ಮತ್ತು ಶಾಂತಿಗೆ ಯೋಗ ಪ್ರಮುಖ ಸಾಧನ. ಓರ್ವ ಆರೋಗ್ಯವಂತ ವ್ಯಕ್ತಿ ಮಾತ್ರ ಸಮಾಜದ ಶಕ್ತಿಯಾಗಬಲ್ಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದ ಮೂಲಕ ನಿರೋಗಿಗಳಾಗಿ ಸಮಾಜದ ಶಕ್ತಿಗಳಾಗಬೇಕು. ವೈಯಕ್ತಿಕ ಸ್ವಾಸ್ಥ್ಯ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಆರೋಗ್ಯ ಮಂತ್ರಿಯ ಕೆಲಸ ಅಲ್ಲ. ಪ್ರತಿಯೊಬ್ಬರೂ ಅವರವರ ಉತ್ತಮ ಆರೋಗ್ಯಕ್ಕಾಗಿ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಸಾಮಾಜಿಕ ಧುರೀಣ ರಾಮ್ ಪಾಲ್ ಮುತ್ಯಾಳ ಕಾರ್ಯಕ್ರಮ ಸಂಯೋಜಿಸಿದರು.
ಆಸ್ಟ್ರೇಲಿಯಾದ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ ಅಳವಡಿಸುವಂತೆ ಮನವಿ ಸಲ್ಲಿಸಲಾಯಿತು