ಸುದ್ದಿಕಿರಣ ವರದಿ
ಬುಧವಾರ, ಜುಲೈ 13
ರಾಷ್ಟ್ರ ಲಾಂಛನ ನೋಡುವ ಕಾಂಗ್ರೆಸಿಗರ ದೃಷ್ಟಿಕೋನ ಬೇರೆ
ಉಡುಪಿ: ರಾಷ್ಟ್ರ ಲಾಂಛನ ನೋಡುವ ಕಾಂಗ್ರೆಸಿಗರ ದೃಷ್ಟಿಕೋನ ಬೇರೆಯಾಗಿದ್ದು, ಅವರು ನಿದ್ರಿಸುತ್ತಿರುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್ ಭವನದ ಹೊಸ ಕಟ್ಟಡದ ಮೇಲ್ಗಡೆ ಈಚೆಗೆ ಪ್ರಧಾನಿ ಮೋದಿ ಸ್ಥಾಪಿಸಿರುವ ಲೋಹದ ರಾಷ್ಟ್ರೀಯ ಸಿಂಹ ಲಾಂಛನ ಕುರಿತ ಕಾಂಗ್ರೆಸ್ ಟೀಕೆಗೆ ಪ್ರತಿಮಾತುಗಳನ್ನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನ ಸಂಸ್ಕೃತಿಗೆ ತಕ್ಕಂತೆ ಸಿಂಹ ಕಾಣುತ್ತದೆ ಎಂದು ಕುಹಕವಾಡಿದರು.
ಸಾರನಾಥದ ಪಡಿಯಚ್ಚು
ಸಾರನಾಥದಲ್ಲಿರುವ ಅಶೋಕ ಲಾಂಛನವನ್ನೇ ಅನುಕರಿಸಿ ಲಾಂಛನ ಸಿದ್ಧಪಡಿಸಲಾಗಿದೆ. ಆದರೆ, ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.
ಲಾಂಛನ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಸಾರನಾಥದ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ.
ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ಲಾಂಛನ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುವುದು ನಮ್ಮ ದೃಷ್ಟಿಕೋನ ವನ್ನು ಸೂಚಿಸುತ್ತದೆ ಎಂದು ಬೊಮ್ಮಾಯಿ ಮಾತಿನ ಚಾಟಿ ಬೀಸಿದರು.
ಲಾಂಛನವನ್ನು ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ, ಬಿಜೆಪಿಯವರಾದ ನಾವು ನೋಡುವ ದೃಷ್ಟಿ ಬೇರೆ. ಕಾಂಗ್ರೆಸ್ ಅದರಲ್ಲಿ ರಾಜಕೀಯ ಹುಡುಕುತ್ತದೆ. ನಮ್ಮಲ್ಲಿ ಕ್ರಿಯಾಶೀಲ, ಆ್ಯಕ್ಟಿವ್ ಪ್ರಧಾನಿ ಇದ್ದಾರೆ. ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್, ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದೆ. ಅವರಿಗೆ ಹಾಗೇ ಕಾಣುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು