ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 12
ಅತಿವೃಷ್ಟಿ ಸಂಕಷ್ಟ ಕಾಲದಲ್ಲಿ ಜನರೊಂದಿಗೆ ಸರ್ಕಾರವಿದೆ
ಮೈಸೂರು: ಅತಿವೃಷ್ಟಿಯ ಸಂಕಷ್ಟ ಕಾಲದಲ್ಲಿ ಜನರೊಂದಿಗೆ ಸರ್ಕಾರ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಸಚಿವ ಎಸ್. ಅಂಗಾರ, ದ.ಕ. ಜಿಲ್ಲೆಯಲ್ಲಿ ಸುನಿಲ್ ಕುಮಾರ್ ಉತ್ತರ ಕನ್ನಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಡಿಕೇರಿಯಲಿ ಎಸ್. ಟಿ ಸೋಮಶೇಖರ್ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಈಗಾಗಲೇ ಕೊಡಗು, ಮಂಗಳೂರಿಗೆ ಹೋಗಿ ಬಂದಿದ್ದಾರೆ. ಇಡೀ ಸರ್ಕಾರವೇ ಈ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.
ನಾನೂ ಸಹ ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡಲಿದ್ದೇನೆ ಎಂದರು
ಪ್ರಾಥಮಿಕ ಸಮೀಕ್ಷೆ
ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕರಾವಳಿಯಲ್ಲಿ ಕಡಲ್ಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿದೆ.
ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆಯಾಗಿದೆ. ಪ್ರಥಮ ಹಂತದ ಸಮೀಕ್ಷೆ ನಡೆಸಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು ಎಂದರು.
ಎನ್.ಡಿ.ಆರ್.ಎಫ್.ನಲ್ಲಿ 730 ಕೋ. ರೂ
ಬೆಳೆ ಹಾನಿ ಅಂದಾಜು ಮಾಡಿದ ನಂತರ ಕೇಂದ್ರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು. ಎನ್.ಡಿ.ಆರ್.ಎಫ್.ನಲ್ಲಿ ಸದಸ್ಯ 730 ಕೋ. ರೂ.ಗಳು ಇದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದರು.
ಸುರಕ್ಷತೆಗೆ ಕ್ರಮ
ಉತ್ತರ ಕರ್ನಾಟಕದಲ್ಲಿ 63 ಊರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕಡೆ ಜನರು ಸ್ಥಳಾಂತರವಾಗಿಲ್ಲ. ವಿಶೇಷವಾಗಿ ನದಿಪಾತ್ರಗಳಲ್ಲಿರುವ ಗ್ರಾಮಗಳ ಮನೆಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತಗೊಳಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಆ ಪ್ರಕಾರ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ನಿಗಮ ಮಂಡಳಿ: ಹೊಸಬರಿಗೆ ಅವಕಾಶ
ನಿಗಮ ಮಂಡಳಿಗಳ ಕೋರ್ ಸಮಿತಿಯಲ್ಲಿ ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನವಾಗಿದೆ. ಬೇರೆಯವರಿಗೂ ಅವಕಾಶ ಒದಗಿಸಲಾಗುತ್ತಿದೆ ಎಂದರು