ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ಜಾನಪದ ಮುಖವಾಡಗಳ ವಿಶ್ವದರ್ಶನ
ಉಡುಪಿ: ವಿಶ್ವದ ಸುಮಾರು ಐವತ್ತು ದೇಶಗಳ 150ಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ ಇಲ್ಲಿನ ಕುಂಜಿಬೆಟ್ಟು ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂನ್ 17ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದು, ಗುರುವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಅನಾವರಣಗೊಳಿಸಿದರು.
ವೃತ್ತಿಯಲ್ಲಿ ವೈದ್ಯರಾಗಿರುವ ಮುಖವಾಡ ಸಂಗ್ರಾಹಕ ಹಾಗೂ ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ಸಂಗ್ರಹದ ಅಪೂರ್ವ ಮುಖವಾಡಗಳನ್ನು ವೀಕ್ಷಿಸಿ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬೈ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಯಾಗಿದ್ದರು.
ಮುಖವಾಡಗಳನ್ನು ಪರಿಚಯಿಸಿದ ಡಾ. ಕಿರಣ್ ಆಚಾರ್ಯ, ಕೇವಲ ಚಹರೆಗಳನ್ನು ಮರೆಮಾಚಲು ಹಾಗೂ ಅಲಂಕಾರಕ್ಕೆ ಮಾತ್ರಲ್ಲದೆ ಆರೋಗ್ಯ ವರ್ಧನೆ, ಶತ್ರು ಬಾಧೆ ನಿವಾರಣೆ, ಯುದ್ಧಗಳಲ್ಲಿ ಶತ್ರು ದಾಳಿ ತಡೆ ಇತ್ಯಾದಿಗಳಿಗೆ ಮುಖವಾಡಗಳನ್ನು ಬಳಸಲಾಗುತ್ತಿತ್ತು. ಅಂಥ ಕೆಲವು ಮುಖವಾಡಗಳನ್ನು ಉಡುಪಿ ಭಾಗದ ಕಲಾಸಕ್ತರಿಗೆ ಪರಿಚಯಿಸುವ ಆಶಯದಿಂದ ಈ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಸ್ವಾಗತಿಸಿ, ನಿರೂಪಿಸಿದರು. ಪ್ರತಿಮಾ ಆಚಾರ್ಯ ವಂದಿಸಿದರು.
ದಕ್ಷಿಣ ಅಮೆರಿಕಾ, ಇಟೆಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾಪೂರ್ಣವಾಗಿ ಜೋಡಿಸಿಡಲಾಗಿದೆ. ಅಧ್ಯಯನಾಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಒದಗಿಸಲಾಗಿದೆ.
ಜೂ 17ರಿಂದ 19ರ ವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.