ಸುದ್ದಿಕಿರಣ ವರದಿ
ಭಾನುವಾರ, ಜನವರಿ 2, 2022
ಶಾಲಾ ಕಾಲೇಜುಗಳಲ್ಲಿ ಏಕರೂಪ ವಸ್ತ್ರ ಸಂಹಿತೆ ಜಾರಿಗೆ ಆಗ್ರಹ
ಉಡುಪಿ: ಶಾಲಾ ಕಾಲೇಜುಗಳಲ್ಲಿ ಏಕರೂಪದ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಉಡುಪಿ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಸರಕಾರವನ್ನು ಆಗ್ರಹಿಸಿದ್ದಾರೆ.
ಈಚೆಗೆ ಇಲ್ಲಿನ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಷಯದಲ್ಲಿ ಗೊಂದಲ ಸೃಷ್ಟಿಸಿರುವುದು ದುರದೃಷ್ಟಕರ.
ಕಳೆದ 36 ವರ್ಷದಿಂದ ಧಾರ್ಮಿಕ ಸಂಹಿತೆ ಕಾಪಾಡಿಕೊಂಡು ಬಂದ ಕಾಲೇಜಿಗೆ ಏಕಾಏಕಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಹಿಂದಿರುವ ಹಾಗೂ ಶಾಲಾ ಕಾಲೇಜುಗಳಲ್ಲಿ ಮತೀಯ ವಿಷಬೀಜ ಬಿತ್ತುತ್ತಿರುವ ಮತೀಯ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
ವಸ್ತ್ರ ಸಂಹಿತೆ ವಿಚಾರದಲ್ಲಿ ಆಯಾಯ ಶಾಲಾ- ಕಾಲೇಜಿನ ನಿಯಮ ಪಾಲಿಸುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಕರ್ತವ್ಯ.
ಈ ನಿಟ್ಟಿನಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ನಿಲುವನ್ನು ಉಡುಪಿ ಜಿಲ್ಲಾ ರಾಮ್ ಸೇನೆ ಗೌರವಿಸುತ್ತದೆ ಎಂದು ಅಂಬೆಕಲ್ಲು ತಿಳಿಸಿದ್ದಾರೆ.
ಮತೀಯ ಸಂಘಟನೆಗಳಿಂದ ಮುಗ್ಧ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ರಕ್ಷಿಸಲು ಸರಕಾರ ಏಕರೂಪ ವಸ್ತ್ರ ಸಂಹಿತೆಯನ್ನು ಮುಂದಿನ ಶೈಕ್ಷಣಿಕ ವರ್ಷದೊಳಗೆ ಜಾರಿಗೊಳಿಸಬೇಕು ಎಂದವರು ಸರಕಾರಕ್ಕೆ ತಾಕೀತು ಮಾಡಿದ್ದಾರೆ.