ಮಣಿಪಾಲ: ಸಹಾಯ ಹಸ್ತ ಮಣಿಪಾಲ್ ಲಯನ್ಸ್ ಚಾರಿಟಬಲ್ ಫೌಂಡೇಶನ್, ದಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ಮತ್ತು ಸಿ.ಎಸ್.ಆರ್ ಪ್ರಾಜೆಕ್ಟ್ ಆಫ್ ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಕ್ಕಳ ರಕ್ತಶಾಸ್ತ್ರ ಮತ್ತು ಆ್ಯಂಕೊಲಾಜಿ ವಿಭಾಗಕ್ಕೆ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಹಸ್ತಾಂತರಿಸಿದ ಉಪಕರಣಗಳು ಜೈವಿಕ ಸುರಕ್ಷತೆ ಕ್ಯಾಬಿನೆಟ್ ವರ್ಗ 2, ಟೈಪ್ ಎ 2 ಆಗಿದ್ದು ದಾದಿಯರು, ವೈದ್ಯರು ಮತ್ತು ರೋಗಿಗಳಿಗೆ ಸುರಕ್ಷತೆ ಖಾತ್ರಿಪಡಿಸುವ ಕಟ್ಟುನಿಟ್ಟಾದ ಅಸೆಪ್ಟಿಕ್ ಮುನ್ನೆಚ್ಚರಿಕೆಗಳಡಿಂ ಕೀಮೋಥೆರಪಿ ನಡೆಸಲು ಸಹಕಾರಿಯಾಗಲಿದೆ.
ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317ಸಿ ಜಿಲ್ಲಾ ರಾಜ್ಯಪಾಲ ಎಚ್. ವಿಶ್ವನಾಥ ಶೆಟ್ಟಿ ಅಭ್ಯಾಗತರಾಗಿದ್ದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಎಲ್ಲಾ ಚಿಕಿತ್ಸೆಗಳನ್ನು ಆಧುನಿಕ ಸೌಲಭ್ಯದೊಂದಿಗೆ ಕಡಿಮೆ ದರದಲ್ಲಿ ನೀಡುತ್ತಿರುವುದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಇನ್ನಷ್ಟು ಅನುದಾನ ತರಲಾಗುವುದು ಮತ್ತು ಅನುದಾನ ನೀಡುವ ನಮ್ಮ ಮೊದಲ ಆಯ್ಕೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಆಗಿರುತ್ತದೆ ಎಂದರು.
ಜಿಲ್ಲಾ 2ನೇ ಉಪ ರಾಜ್ಯಪಾಲ ಡಾ| ನೇರಿ ಕರ್ನೇಲಿಯೊ, ಸಹಾಯ ಹಸ್ತ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥ ಡಾ. ಎಚ್. ಗಣೇಶ್ ಪೈ, ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಫೆಡರಲ್ ಬ್ಯಾಂಕ್ ವ್ಯವಸ್ಥಾಪಕ ಕೆ. ಶೈನ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಲಯನ್ಸ್ ಕ್ಲಬ್ ಮಣಿಪಾಲ್ ಅಧ್ಯಕ್ಷ ಸತೀಶ್ಚಂದ್ರ, ಎಂಸಿಸಿಸಿಸಿ ಸಂಯೋಜಕ ಡಾ. ನವೀನ್ ಎಸ್. ಸಲೀನ್ಸ್, ಮಕ್ಕಳ ರಕ್ತಶಾಸ್ತ್ರ ಮತ್ತು ಆ್ಯಂಕೊಲಾಜಿ ವಿಭಾಗದ ಡಾ. ವಾಸುದೇವ ಭಟ್ ಮೊದಲಾದವರಿದ್ದರು