ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಸಂಸ್ಥೆಯ ರಜತಪಥದಲ್ಲಿ ವಿಪ್ರ ಹೆಜ್ಜೆ ಸರಣಿ ಕಾರ್ಯಕ್ರಮದಡಿ 6ನೇ ಕಾರ್ಯಕ್ರಮವಾಗಿ ವಲಯದ ಹಿರಿಯ ಹಾಗೂ ಪ್ರಸಿದ್ಧ ವೈದ್ಯ ಡಾ. ಎ. ಆರ್. ಆಚಾರ್ಯ ಅವರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆ ಮಾಡಲಾಯಿತು.
ಅಂತೆಯೇ ವಲಯದ ಇತರ ವೈದ್ಯರಿಗೆ ಅವರ ನಿಸ್ವಾರ್ಥ ಸೇವೆಗಾಗಿ ವೀಡಿಯೊ ಸಂದೇಶ ಮೂಲಕ ಶುಭಾಶಯ ಕೋರಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಆಯೋಜಿಸಲಾಗಿದ್ದು, ಡಾ. ಎ. ಆರ್. ಆಚಾರ್ಯ ಆರೋಗ್ಯಕರ ಜೀವನಕ್ಕೆ ಆಯುರ್ವೇದದ ಸೂತ್ರಗಳು ವಿಷಯದಲ್ಲಿ ಉಪನ್ಯಾಸ ನೀಡಿದರು.
ಮುಂಜಾನೆ ಏಳುವ ಸಮಯ, ದಂತ ಮಜ್ಜನ, ವ್ಯಾಯಾಮ ಹಾಗೂ ಯೋಗ, ಅಭ್ಯಂಜನ, ಆಹಾರ ಪದ್ಧತಿ ಹಾಗೂ ದಿನನಿತ್ಯ ನಾವು ಅನುಸರಿಸಬೇಕಾಗಿರುವ ಉಪಯುಕ್ತ ಮಾಹಿತಿಯನ್ನು ಡಾ. ಆಚಾರ್ಯ ನೀಡಿದರು. ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಅನೇಕ ರೋಗ ರುಜಿನಗಳಿಂದ ದೂರವಿರಬಹುದು ಎಂದು ಸಲಹೆ ನೀಡಿದರು.
ಕೊಡವೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಶ್ರೀನಿವಾಸ ಬಾಯರಿ, ರಜತೋತ್ಸವ ಸಮಿತಿ ಕೋಶಾಧಿಕಾರಿ ಶ್ರೀಧರ ಶರ್ಮ, ಮಾಧ್ಯಮ ಪ್ರತಿನಿಧಿ ಪ್ರಸನ್ನ ಕೊಡವೂರು ಇದ್ದರು.
ರಜತೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ ಕೊಡವೂರು ಸ್ವಾಗತಿಸಿ, ಕಾರ್ಯಾಧ್ಯಕ್ಷ ಮಂಜುನಾಥ ಭಟ್ ವಂದಿಸಿದರು.