ಉಡುಪಿ: ಉಪಕಾರ ಮಾಡಿದರಿಗೆ ಪ್ರತ್ಯುಪಕಾರ ಮಾಡದಿದ್ದರೆ ನಾವು ಅಪರಾಧಿಗಳಾಗುತ್ತೇವೆ. ಇದು ಜನ್ಮಾಂತರದಲ್ಲೂ ಕಷ್ಟಕ್ಕೆ ನಾಂದಿಯಾಗುತ್ತದೆ. ದೇಶದಲ್ಲಿ ಕ್ಷೋಭೆಗೂ ಕಾರಣವಾಗುತ್ತದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಆದಿವುಡುಪಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನಂಥ ತ್ಯಾಗಜೀವಿಗಳ ಸ್ಮರಣೆಯಿಂದ ಯುವಜನರಲ್ಲಿ ದೇಶಪ್ರೇಮ ಜಾಗೃತವಾಗಲು ಸಾಧ್ಯ ಎಂದು ಶ್ರೀಗಳು ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಇದ್ದರು.
ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ನಗರದ ರಸ್ತೆಯೊಂದಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕೆಂಬ ಮನವಿಯನ್ನು ಮುಂದಿನ ನಗರಸಭೆ ಅಧಿವೇಶನದಲ್ಲಿ ಮಂಡಿಸಿ, ಚಿಂತಿಸಲಾಗುವುದು ಎಂದರು.
ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದೇಶಪ್ರೇಮಿಗಳ ಸಂಘಟನೆಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಕೊಡವೂರು, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಕರವೇ ಜಿಲ್ಲಾಧ್ಯಕ್ಷ ಸುಜಯ ಪೂಜಾರಿ, ಹಾಲುಮತ ಮಹಾಸಭಾ ಅಧ್ಯಕ್ಷ ಸಿದ್ದಪ್ಪ ಎಚ್. ಐಹೊಳೆ, ಕನಕದಾಸ ಸಮಾಜ ಸೇವಾ ಸಂಘ ಅಧ್ಯಕ್ಷ ಹನುಮಂತ ಐಹೊಳೆ ಮೊದಲಾದವರಿದ್ದರು.
ಜನಾರ್ದನ ಕೊಡವೂರು ಪ್ರಸ್ತಾವನೆಗೈದರು. ಸವಿತಾ ನೋಟಗಾರ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಲಕ್ಷ್ಮಣ್ ವಂದಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಸಹಕರಿಸಿದರು