ಸುದ್ದಿಕಿರಣ ವರದಿ
ಗುರುವಾರ, ಮೇ 26
ಕಟ್ಟೆ ಭೋಜಣ್ಣ ಪ್ರಕರಣಕ್ಕೆ ತಿರುವು ನೀಡಿದ ಡೆತ್ ನೋಟ್
ಕುಂದಾಪುರ: ಸ್ವಂತ ರಿವಾಲ್ವರ್ ನಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಬಹುಕೋಟಿ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ (80) ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಡೆತ್ ನೋಟ್ ಲಭಿಸಿದ್ದು, ಅದರ ಆಧಾರದಲ್ಲಿ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ನಿವಾಸಿ ಇಸ್ಮಾಯಿಲ್ ಎಂಬವರಿಗೆ ನೀಡಿದ 3.34 ಕೋಟಿ ರೂಪಾಯಿ ನಗದು ಮತ್ತು 5 ಕೆಜಿ ಚಿನ್ನದ ವಿಚಾರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಏನಿದೆ ಡೆತ್ ನೋಡ್ ನಲ್ಲಿ?
ಮೃತ ಕಟ್ಟೆ ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ “ತನ್ನ ಪರಿಚಯಸ್ಥರಾದ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ನಿವಾಸಿ ಇಸ್ಮಾಯಿಲ್ ಎಂಬವರು 2013ರಲ್ಲಿ 3.34 ಕೋಟಿ ರೂಪಾಯಿ ನಗದು ಮತ್ತು 5 ಕೆಜಿ ಚಿನ್ನ ಪಡೆದುಕೊಂಡಿದ್ದು ಇಲ್ಲಿವರೆಗೆ ಯಾವುದೇ ಅಸಲು ಮತ್ತು ಬಡ್ಡಿಯನ್ನೂ ನೀಡಿಲ್ಲ.
`ಈ ವಿಚಾರದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೂಲಕ 6- 7 ಬಾರಿ ಮಾತುಕತೆ ನಡೆಸಿದ್ದು, ಗಣೇಶ್ ಶೆಟ್ಟಿ ವಾಯಿದೆ ಕೇಳಿದ್ದು ಇದುವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ಚಿನ್ನ ಮತ್ತು ನಗದಿಗೆ ಬ್ಯಾಂಕ್ ಬಡ್ಡಿ ಸೇರಿಸಿದರೆ ಸುಮಾರು 9 ಕೋಟಿಗೂ ಅಧಿಕ ಮೊತ್ತವಾಗುತ್ತದೆ. ತಾನು ಇಲ್ಲಿಯ ತನಕ ಮರ್ಯಾದೆಯಿಂದ ಬಾಳಿಕೊಂಡು ಬಂದಿದ್ದು, ನಾನು ಹೊರಗಿನವರಿಗೆ ಹಣ ಕೊಟ್ಟಿದ್ದು, ಬ್ಯಾಂಕ್ ನಲ್ಲಿ ಸಾಲ ಇದೆ. ಗಣೇಶ್ ಶೆಟ್ಟಿ ಮನೆಗೆ ತಿರುಗಿ ಸಾಕಾಗಿದ್ದು ಮನಸ್ಸಿಗೆ ಬೇಸರವಾಗಿ ಅವರ ಮನೆಯಲ್ಲಿಯೇ ತನ್ನ ಸ್ವಂತ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಗಣೇಶ್ ಶೆಟ್ಟಿ ಮತ್ತು ಹಂಗ್ಳೂರು ಇಸ್ಮಾಯಿಲ್ ಅವರಿಂದ ಹಣವನ್ನು ವಸೂಲಿ ಮಾಡಿ ನನ್ನ ಮನೆಯವರಿಗೆ ನೀಡಿ’ ಎಂದು ಕುಂದಾಪುರ ಠಾಣಾಧಿಕಾರಿಗೆ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡಿದ್ದರು.
ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆಗೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.