ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6
ಉಪರಾಷ್ಟ್ರಪತಿಯಾಗಿ ಧನಕರ್ ಆಯ್ಕೆ
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗಾಗಿ ನಡೆದ ಮತದಾನದಲ್ಲಿ ಎನ್.ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಮಣಿಸಿದ್ದಾರೆ. ಆ ಮೂಲಕ ಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಮತದಾನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಭಾಗವಹಿಸಿದ್ದರು. 780 ಮಂದಿ ಸಂಸದರ ಪೈಕಿ ಒಟ್ಟು 725 ಮಂದಿ ಮತ ಚಲಾಯಿಸಿದರು. ಶೇ. 92.94 ಮತದಾನವಾಗಿದೆ.
ಜಗದೀಪ್ ಧನಕರ್ 528 ಮತ ಪಡೆದರೆ, ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಆಗಸ್ಟ್ 11ರಂದು ನೂತನ ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
1951ರ ಮೇ 18ರಂದು ರಾಜಸ್ಥಾನದಲ್ಲಿ ಜನಿಸಿದ ಜಗದೀಪ್ ಧನಕರ್, ಬಿ.ಎಸ್.ಸಿ ಮತ್ತು ಎಲ್.ಎಲ್.ಬಿ ಪದವಿ ಪಡೆದಿದ್ದಾರೆ.
ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರೂ ಆಗಿದ್ದರು.