ಕೃಷ್ಣಮಠ ಆಸ್ಥಾನ ವಿದ್ವಾಂಸ ಕೊರಂಗ್ರಪಾಡಿ ಸೀತಾರಾಮ ಆಚಾರ್ಯ ಇನ್ನಿಲ್ಲ
ಉಡುಪಿ, ಡಿ 6 (ಸುದ್ದಿಕಿರಣ ವರದಿ): ಹಿರಿಯ ಜ್ಯೋತಿಷಿ, ಕೃಷ್ಣಮಠದ ಆಸ್ಥಾನ ವಿದ್ವಾಂಸ, ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಕೊರಂಗ್ರಪಾಡಿ ಸೀತಾರಾಮ ಆಚಾರ್ಯ (92) ಸೋಮವಾರ ನಿಧನರಾದರು.
ಇಲ್ಲಿನ ಶ್ರೀಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸುದೀರ್ಘ ಅವದಿಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
ಉಡುಪಿ ಅಷ್ಟಮಠಗಳ ಎಲ್ಲ ಯತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು, ಶ್ರೀಕೃಷ್ಣ ಮಠದ ಆಸ್ಥಾನ ವಿದ್ವಾಂಸರಾಗಿದ್ದರು.
ಉಡುಪಿ ಶ್ರೀಕೃಷ್ಣ ಪಂಚಾಂಗಕ್ಕೆ ಮಾರ್ಗದರ್ಶಕರಾಗಿ ಸಹಕರಿಸುತ್ತಿದ್ದರು.
ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಪೇಜಾವರಶ್ರೀ ಸಂತಾಪ
ಕೊರಂಗ್ರಪಾಡಿ ಸೀತಾರಾಮ ಆಚಾರ್ಯರ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅನೇಕ ವರ್ಷಗಳ ಕಾಲ ಅಧ್ಯಾಪನ ವೃತ್ತಿ ನಡೆಸಿ, ಉತ್ತಮ ಜ್ಯೋತಿಷಿಯಾಗಿಯೂ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದ ಆಚಾರ್ಯರು ಉಡುಪಿ ಶ್ರೀಕೃಷ್ಣ ಮಠದ ಆಸ್ಥಾನ ವಿದ್ವಾಂಸರಾಗಿ ಶ್ರೀಮಠವೂ ಸೇರಿದಂತೆ ಎಲ್ಲ ಮಠಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ನಮ್ಮ ಗುರುಗಳ ವಿಶೇಷ ಅಭಿಮಾನಪಾತ್ರರೂ ಆಗಿದ್ದರು.
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲೆಂದು ಆರಾಧ್ಯಮೂರ್ತಿ ಶ್ರೀರಾಮ ಕೃಷ್ಣ ವಿಠಲ ದೇವರಲ್ಲಿ ಪ್ರಾರ್ಥಿಸುವುದಾಗಿ ಶ್ರೀಪಾದರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ