ಉಡುಪಿ: ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲೊಂದಾಗಿರುವ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿ ಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನ ಶೋಧಿಸಲ್ಪಟ್ಟಿದ್ದು, ಅವುಗಳ ಪುನಃನಿರ್ಮಾಣಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ ಶ್ರೀಮಠದ ಪ್ರಸ್ತುತ ಯತಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜ್ಯೋತಿಷಿ ಇರ್ವತ್ತೂರು ಗೋಪಾಲ ಜೋಯಿಸ ಮಾರ್ಗದರ್ಶನದಲ್ಲಿ ವಿದ್ವಾನ್ ಕೃಷ್ಣ ಕುಮಾರ ಆಚಾರ್ಯ ಅಧ್ವರ್ಯುತನದಲ್ಲಿ ಸೋಮವಾರ ನಡೆಯಿತು.
ಮಠದಲ್ಲಿ ಈಚೆಗೆ ನಡೆದ ಆರೂಢ ಪ್ರಶ್ನೆ ಸಂದರ್ಭದಲ್ಲಿ ಪೂರ್ವಯತಿದ್ವರ ವೃಂದಾವನ ಭೂಗತವಾಗಿರುವುದು ಅರಿವಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಠದ ಅಧೀನದ ಜಮಿನಿನಲ್ಲಿ ಶೋಧ ನಡೆಸಿದಾಗ ಪರಂಪರೆಯ 25ನೇ ಯತಿಗಳಾದ ಶ್ರೀ ವಿದ್ಯಾರಾಜೇಂದ್ರತೀರ್ಥರು ಮತ್ತು 13ನೆಯವರಾದ ಶ್ರೀ ವಿಶ್ವೋತ್ತಮತೀರ್ಥರ ವೃಂದಾವನದ ಸ್ಥಳ ಶೋಧಿಸಲ್ಪಟ್ಟಿತ್ತು. ಇದೀಗ ಅದೇ ಸ್ಥಳದಲ್ಲಿ ನೂತನ ಶಿಲಾಮಯ ವೃಂದಾವನ ನಿರ್ಮಿಸಿ ಪುನಃಪ್ರತಿಷ್ಠಾಪಿಸಲಾಗಿದೆ.
ಅದೇ ರೀತಿ ಮಠದ ಆವರಣದಲ್ಲಿ ಆರಾಧಿಸಲಾಗುತ್ತಿರುವ ವೃಂದಾವನಗಳಲ್ಲಿ ಒಂದು ಯಾರದ್ದೆಂಬ ಬಗ್ಗೆಯೂ ಮಾಹಿತಿ ಇರಲಿಲ್ಲ. ಇದೀಗ ಆ ಬಗ್ಗೆಯೂ ಬಹಳ ನಿಷ್ಕರ್ಷೆ ನಡೆಸಿ 3ನೆಯ ಯತಿ ಶ್ರೀ ಹಿರಣ್ಯಗರ್ಭತೀರ್ಥರದ್ದೆಂದು ನಿರ್ಣಯಿಸಲಾಗಿದೆ.
ಶ್ರೀಮಠದ ಬಗ್ಗೆ
ಶ್ರೀ ಕೋದಂಡರಾಮ ದೇವರು ಆರಾಧ್ಯಮೂರ್ತಿಯಾಗಿರುವ ಭಂಡಾರಕೇರಿ ಮಠ, ಉಡುಪಿ ಸಮೀಪದ ಬಾರಕೂರಿನಲ್ಲಿ ಮೂಲ ಮಠ ಹೊಂದಿದ್ದು, ಉಡುಪಿ ರಥಬೀದಿಯ ಸುತ್ತಿನಲ್ಲೂ ಒಂದು ಮಠ ಇದೆ.
ಬಾರಕೂರು ಅರಸೊತ್ತಿಗೆಯಿಂದ ಭರಪೂರ ಮಾನ್ಯತೆ ಪಡೆದಿತ್ತು ಎನ್ನುವುದು ಶ್ರೀಮಠದಲ್ಲಿ ಹಾಗೂ ಬಾರಕೂರಿನಲ್ಲಿ ಲಭ್ಯವಿರುವ ದಾನಶಾಸನಗಳಿಂದ ತಿಳಿದುಬರುತ್ತದೆ. ಮೈಸೂರು, ಬೆಂಗಳೂರುಗಳಲ್ಲೂ ಮಠದ ಶಾಖೆಗಳಿವೆ.
ಅನೇಕ ಮಹಾಜ್ಞಾನಿಗಳ ಈ ಯತಿ ಪರಂಪರೆಯಲ್ಲಿ ಶ್ರೀ ವಾದಿರಾಜ ಗುರುಸಾರ್ವಭೌಮರ ಪೂರ್ವಾಶ್ರಮದ ಸಹೋದರರಾಗಿದ್ದ ಶ್ರೀ ಸುರೋತ್ತಮತೀರ್ಥರೂ ಸೇರಿದ್ದಾರೆ. ಈ ಮಠದಲ್ಲಿ ಯತಿಗಳಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರು ಬಳಿಕ ಪಲಿಮಾರು ಮಠಕ್ಕೆ ನಿಯುಕ್ತಿಗೊಂಡಿದ್ದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೂ ಸನ್ಯಾಸ ಸ್ವೀಕರಿಸಿದ ಬಳಿಕ ಅನೇಕ ವರ್ಷ ಕಾಲ ಭಂಡಾರಕೇರಿ ಮೂಲ ಮಠದಲ್ಲೇ ಶಾಸ್ತ್ರಾಧ್ಯಯನ ನಡೆಸಿದ್ದರು.
ಪ್ರಸ್ತತ 34ನೆಯ ಉತ್ತರಾಧಿಕಾರಿಯಾಗಿರುವ ಶ್ರೀ ವಿದ್ಯೇಶತೀರ್ಥರು ಸ್ವಭಾವತಃ ಅಂತರ್ಮುಖಿಗಳೂ, ಅಧ್ಯಯನಶೀಲರೂ, ತಪಃಸ್ವಾಧ್ಯಾಯನಿಷ್ಠರೂ ಆಗಿದ್ದಾರೆ. ಸ್ವತಃ ಕವಿಯೂ ಆಗಿರುವ ಅವರು, ಸಂಸ್ಕೃತ ಮತ್ತು ಕನ್ನಡದಲ್ಲಿ ದೇವ- ದೇವತೆಗಳನ್ನು ಸ್ತುತಿಸುವ ಪದ್ಯಕಾವ್ಯಗಳನ್ನು ರಚಿಸಿದ್ದಾರೆ. ಭಾಗವತ, ಮಹಾಭಾರತ ಮೊದಲಾದವುಗಳ ನಿರಂತರ ಪ್ರವಚನಗಳ ಮೂಲಕ ಮಾಧ್ವ ತತ್ವ ಸಂದೇಶ ಪ್ರಸಾರ ಕಾರ್ಯದಲ್ಲಿ ನಿರತರಾಗಿದ್ದಾರೆ.