ಬೆಂಗಳೂರು: ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ರಾಜ್ಯಪಾಲ ವಾಜೂಭಾಯಿ ರುಡಾಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.
ಅಯೋಧ್ಯೆ ರಾಮಮಂದಿರ ಕಾರ್ಯಕ್ಕೆ ಸಮಸ್ತರ ಬೆಂಬಲ, ಸಹಕಾರ ಬಯಸಿ ದಕ್ಷಿಣ ರಾಜ್ಯಗಳ ಸಂಚಾರದಲ್ಲಿರುವ ಶ್ರೀಗಳು, ನಾಡಿನ ಜನತೆಯ ಬೆಂಬಲಕ್ಕಾಗಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದರು.
ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡ ರಾಜ್ಯಪಾಲರು, ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದರು.
ಪೇಜಾವರ ಶ್ರೀಪಾದರು ರಾಜ್ಯಪಾಲರಿಗೆ ಶಾಲು ಹೊದಿಸಿ ಗೌರವಿಸಿದರು.
ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ ಮತ್ತು ಕೃಷ್ಣ ಭಟ್ ಇದ್ದರು.
ಗೋಹತ್ಯಾ ನಿಷೇಧಕ್ಕೆ ಸಹಿ ಸಂಗ್ರಹ
1953ರಲ್ಲಿ ಗುರೂಜಿ ಗೋಳ್ವಲ್ಕರ್ ಗೋಹತ್ಯಾ ನಿಷೇಧಕ್ಕೆ ಕರೆ ಕೊಟ್ಟಾಗ ತಾನಿನ್ನೂ ಎಳೆಯ ಯುವಕನಾಗಿದ್ದೆ. ಆಗ ತನ್ನೊಂದಿಗೆ ಇನ್ನೋರ್ವ ಸ್ನೇಹಿತನನ್ನು ಕರೆದುಕೊಂಡು ಸೈಕಲ್ ನಲ್ಲಿ ಗುಜರಾತಿನಲ್ಲಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಿದ್ದು, ಸಾಕ್ಷರತೆಯ ಕೊರತೆ ಇದ್ದ ಆ ಕಾಲದಲ್ಲಿ ಜನರು ಹೆಬ್ಬೆಟ್ಟು ಒತ್ತಿ ಬೆಂಬಲಿಸಿದ್ದನ್ನು ಸ್ಮರಿಸಿದರು. ಅಯೋಧ್ಯಾ ಆಂದೋಲನದ ವಿವಿಧ ಹಂತಗಳಲ್ಲಿ ಪಾಲ್ಗೊಂಡಿದನ್ನೂ ಸ್ಮರಿಸಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.