ಉಡುಪಿ: ಈಚೆಗೆ ಕೊಡವೂರು ಶಂಕರನಾರಾಯಣ ದೇವಳದಲ್ಲಿ ನಡೆದ ರಾಶಿಪೂಜಾ ಮಹೋತ್ಸವ ಸಂಭ್ರಮವನ್ನು ಕ್ಯಾಮೆರಾಗಳಲ್ಲಿ ದಾಖಲಿಸಿ, ಮಹೋತ್ಸವದ ಸೌಂದರ್ಯ ಇಮ್ಮಡಿಗೊಳಿಸಲಾಗಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿ. ಹೇಳಿದರು.
ರಾಶಿಪೂಜಾ ಮಹೋತ್ಸವ ಸೇವಾ ಸಮಿತಿ, ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಹಾಗೂ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಆಶ್ರಯದಲ್ಲಿ ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವಕ್ಕೆ ಛಾಯಾಚಿತ್ರದ ಸಾಂಗತ್ಯ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ಛಾಯಾಗ್ರಹಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿ, ಜೇಸಿಐ ಸ್ವರ್ಣ ಉಡುಪಿ ಅಧ್ಯಕ್ಷ ಸುದೀಪ್ ಶೆಟ್ಟಿ, ದೊಂದಿ ಬೆಳಕಿನ ರಾಶಿಪೂಜಾ ಮಹೋತ್ಸವದ ಛಾಯಾಗ್ರಹಣ ಕಲಾತ್ಮಕವಾಗಿ ಮೂಡಿಬಂದಿದೆ. ಛಾಯಾಗ್ರಾಹಕರು ಅಭಿನಂದನಾರ್ಹರು ಎಂದರು.
ಸ್ಪರ್ಧಾ ವಿಜೇತರಾದ ಪ್ರದೀಪ್ ಉಪ್ಪೂರು, ಪ್ರಶಾಂತ ಕೆಮ್ಮಣ್ಣು, ಶ್ರೀಕಾಂತ ಉಡುಪ, ದಾಮೋದರ ಸುವರ್ಣ ಹಾಗೂ ಸಚಿನ್ ಪೂಜಾರಿ ಅವರಿಗೆ ಬಹುಮಾನ ನೀಡಲಾಯಿತು.
ವಲಯದ ಸದಸ್ಯರಾಗಿದ್ದು ಪ್ರಸ್ತುತ ಬಾದಾಮಿ ಗ್ರಾ. ಪಂ. ಸದಸ್ಯರಾಗಿ ಆಯ್ಕೆಯಾದ ಬಿ. ಎಂ. ಬೋವಿ ಅವರನ್ನು ಅಭಿನಂದಿಸಲಾಯಿತು.
ವಲಯ ಗೌರವಾಧ್ಯಕ್ಷ ಶಿವ ಕೆ. ಅಮೀನ್ ಇದ್ದರು. ತೀರ್ಪುಗಾರರಾಗಿ ಆಸ್ಟ್ರೋ ಮೋಹನ್ ಸಹಕರಿಸಿದ್ದರು.
ರಾಶಿಪೂಜಾ ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ದೇವಳ ವ್ಯವಸ್ಥಾಪನ ಸಮಿತಿ ಸದಸ್ಯ ಜನಾರ್ದನ ಕೊಡವೂರು ಸ್ವಾಗತಿಸಿದರು. ವಲಯಾಧ್ಯಕ್ಷ ಪ್ರಕಾಶ ಕೊಡಂಕೂರು ಪ್ರಸ್ತಾವನೆಗೈದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು. ಕಾರ್ಯದರ್ಶಿ ಸುಕೇಶ್ ಅಮೀನ್ ವಂದಿಸಿದರು