ಸಂಶೋಧಕನಿಗೆ ನೈತಿಕ ಜವಾಬ್ದಾರಿ ಮುಖ್ಯ
(ಸುದ್ದಿಕಿರಣ ವರದಿ)
ಉಡುಪಿ: ಶೈಕ್ಷಣಿಕ ಸಂಶೋಧನೆಯಲ್ಲಿ ಸಂಶೋಧಕನ ನೈತಿಕತೆ ಅತಿ ಮುಖ್ಯ ಎನಿಸುತ್ತದೆ. ಇದು ಸಂಶೋಧನೆಯಲ್ಲಿ ಸತ್ಯಶೋಧನೆಗೆ ದಾರಿಯಾಗುತ್ತದೆ ಎಂದು ಖ್ಯಾತ ಸಮಾಜಶಾಸ್ತ್ರಜ್ಞ, ವಿಶ್ರಾಂತ ಪ್ರಾಂಶುಪಾಲ ಡಾ. ವೈ.ಕೆ. ರವೀಂದ್ರನಾಥ ಹೇಳಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ಈಚೆಗೆ ನಡೆದ ಸಂಶೋಧನೆಯಲ್ಲಿ ನೈತಿಕ ಜವಾಬ್ದಾರಿ ವಿಷಯ ಕುರಿತ ಅಂತರ್ಜಾಲ ವಿಚಾರ ಸಂಕಿರಣದ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಸಂಶೋಧಕನಲ್ಲಿ ಕರ್ತವ್ಯ ನಿಷ್ಠೆ ಇದ್ದಲ್ಲಿ ಕ್ಷೇತ್ರಕಾರ್ಯ ಮೂಲಕ ಅಧ್ಯಯನ ಮಾಡಿ ಬೆಳಕಿಗೆ ಬಂದ ವಿಚಾರವನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಸಂಶೋಧನಾ ವರದಿ ಸರಕಾರಕ್ಕೆ ಮುಂದಿನ ಯೋಜನೆ ರೂಪಿಸಲು ದಾರಿದೀಪವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ| ಗಣನಾಥ ಶೆಟ್ಟಿ ಎಕ್ಕಾರು, ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡರೆ ಸರಿಯಾದ ಸಮಯದೊಳಗೆ ಹಾಕಿಕೊಂಡ ಉದ್ದೇಶಕ್ಕನುಗುಣವಾಗಿ ಸಂಶೋಧನೆ ಮಾಡಲು ಸಾಧ್ಯ ಎಂದರು.
ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ರಾಘವ ನಾಯ್ಕ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ಡಾ| ಸುರೇಶ್ ರೈ ಕೆ., ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ| ದುಗ್ಗಪ್ಪ ಕಜೆಕಾರ್, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಸುನೀತಾ ವಿ. ಇದ್ದರು.
ಪ್ರಾಧ್ಯಾಪಕಿ ಪ್ರೊ. ಶರ್ಮಿಳಾ ಹಾರಾಡಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಟಿ. ವಂದಿಸಿದರು.