ಉಡುಪಿ: ಜಿಲ್ಲೆಯಲ್ಲಿರುವ ಬಂಜರು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಪಾಳುಭೂಮಿಯೂ ಫಸಲು ಭೂಮಿಯಾಗಬಲ್ಲುದು ಎಂದು ತೋರಿಸಿಕೊಡಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆ, ಕೃಷಿ ಕ್ಷೇತ್ರದಲ್ಲೂ ಗಮನ ಸೆಳೆಯಬೇಕು ಎಂದು ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ ಭಟ್ ವೈ. ಆಶಿಸಿದರು.
ಜಿಲ್ಲಾ ಕೃಷಿಕ ಸಂಘ ವತಿಯಿಂದ ಭಾನುವಾರ ಶಾರದಾ ಮಂಟಪದಲ್ಲಿ ನಡೆದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿ ಬಂಜರು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿ ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಪಾಳುಬಿದ್ದ 1,500 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೃಷಿ ಇಲಾಖೆ, ಜಿ. ಪಂ. ಸಹಕಾರದಲ್ಲಿ ನಡೆಯಲಿದೆ. ಆ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಎಲ್ಲ ರೈತರೂ ಕೃಷಿಯಲ್ಲಿ ಭಾಗಿಯಾಗಿ ಸಹಕರಿಸಬೇಕು ಎಂದವರು ಮನವಿ ಮಾಡಿದರು.
ಜಿಲ್ಲೆಯ ಕೃಷಿಕರು ವೈಜ್ಞಾನಿಕ ಮತ್ತು ಪ್ರಾಯೋಗಿಕತೆಗೆ ಒತ್ತುನೀಡಬೇಕು. ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಸೃಷ್ಟಿಸಬೇಕು. ಆ ಮೂಲಕ ರೈತರಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಸೃಷ್ಟಿಯಾಗಲಿದೆ. ಮಲ್ಲಿಗೆ ಬೆಳೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಂಶೋಧನೆ ಮತ್ತು ಪ್ರಯೋಗ ನಡೆಯಬೇಕು ಎಂದವರು ಹೇಳಿದರು.
ಕೃಷಿಕ ಸಂಘ ಜಿಲ್ಲಾಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಎಜಿಎಂ ಗೋಪಾಲಕೃಷ್ಣ ಸಾಮಗ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಉದ್ಯಮಿ ಮಂಜುನಾಥ ಉಪಾಧ್ಯ, ಕೃಷಿಕ ಸಂಘ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ ಆಗಮಿಸಿದ್ದರು.
ಕೃಷಿಕ ಸಂಘ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಪ್ರಸ್ತಾವನೆಗೈದರು. ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡಿಸಿದರು.
ಶಿಂಬ್ರ ರವೀಂದ್ರ ಪೂಜಾರಿ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಶ್ರೀಧರಮೂರ್ತಿ ಕೆ. ಎಸ್. ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸಾಧಕ ಕೃಷಿಕರಾದ ಉದಯ ಕುಮಾರ್ ಆಚಾರ್ಯ ಹಿರಿಯಡ್ಕ, ರಘುನಾಥ ಪುನಾರ್ ಬೆಳ್ಮಣ್, ಸುಜಾತ ಶೆಟ್ಟಿ ಮಂದರ್ತಿ, ಜಾನ್ ಅಮ್ಮಣ್ಣ ಮುದರಂಗಡಿ, ವಿಶ್ವನಾಥ ಅಮೀನ್ ಕಳತ್ತೂರು ಅವರನ್ನು ಸನ್ಮಾನಿಸಲಾಯಿತು