ಗಾಂಜಾ ಮಾರಾಟ ಪ್ರಕರಣದ ಇಬ್ಬರು ಆರೋಪಿಗಳು ಸೆರೆ, ಮಾಲು ವಶ

ಕೆಜಿಎಫ್,ಮೇ.೧೫: ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರೂ. ೮೦,೦೦೦/- ಮೌಲ್ಯದ ೧ ಕೆ.ಜಿ ೧೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದು, ಹುಣಸನಹಳ್ಳಿ ಬ್ರಿಡ್ಜ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯನ್ನು ಆಧರಿಸಿ, ಬಂಗಾರಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆರ್.ದಯಾನಂದ್ ಮತ್ತು ಸಬ್ಇನ್ಸ್ಪೆಕ್ಟರ್ ಪ್ರಕಾಶ್ ನರಸಿಂಗ್ ಹಾಗೂ ಸಿಬ್ಬಂದಿಗಳು ಕೂಡಲೆ ದಾಳಿ ನಡೆಸಿ, ಭುವನಹಳ್ಳಿ ಗ್ರಾಮದ ವಾಸಿ ನಾಗರಾಜ್ ಮತ್ತು ವೆಂಕಟಾಪುರ ಗ್ರಾಮದ ವಾಸಿ ರಾಮಪ್ಪ ಎಂಬುವರನ್ನು ಬಂಧಿಸಿ, ಅವರಿಂದ ಸುಮಾರು ರೂ. ೮೦,೦೦೦/- ಮೌಲ್ಯದ ೧ ಕೆ.ಜಿ. ೧೦ ಗ್ರಾಂ ಗಾಂಜಾ ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಐ ಆರ್.ದಯಾನಂದ್, ಪಿ.ಎಸ್.ಐ ಪ್ರಕಾಶ್ ನರಸಿಂಗ್ ಹಾಗೂ ಸಿಬ್ಬಂದಿಗಳಾದ ಗಜೇಂದ್ರ, ಮಂಜುನಾಥ್, ವಿಜಯ್ಕುಮಾರ್, ಸಂತೋಷ್ ಸಿದ್ದಾಪುರ ಮತ್ತು ಜೀಪ್ ಚಾಲಕರಾದ ಪ್ರದೀಪ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ಶ್ಲಾಘಿಸಿದ್ದಾರೆ.
ಚಿತ್ರ ಶೀರ್ಷಿಕೆ: ೧೫ಕೆಜಿಎಫ್೦೧: ವಶಪಡಿಸಿದ ಗಾಂಜಾ ಮಾಲಿನೊಂದಿಗೆ ಬಂಗಾರಪೇಟೆ ಪೊಲೀಸರ ತಂಡ.
What's Your Reaction?






