ಸಾಹಿತಿ ಹಾಗೂ ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ಆಧಾರಿತ ಮಕ್ಕಳ ಚಿತ್ರ 

ಸಾಹಿತಿ ಹಾಗೂ ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ಆಧಾರಿತ ಮಕ್ಕಳ ಚಿತ್ರ 

ತಾಳೂರು ಹನುಮಂತರಾಯ ಸನ್ನಿಧಿಯಲ್ಲಿ ಸೆಟ್ಟೇರಿದ “ಪುಟ್ಟಗೂಡಿದ ಪಟ್ಟದರಸಿ” ಮಕ್ಕಳ ಚಿತ್ರ.

ಬೆಂಗಳೂರಿನ ಕಲಾಸಿಪಾಳ್ಯದ ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ಡಿಯಲ್ಲಿ ನಿರ್ಮಾಣವಾಗುತ್ತಿರುವ “ಪುಟ್ಟಗೂಡಿನ ಪಟ್ಟದರಸಿ” ಮಕ್ಕಳ ಚಲನಚಿತ್ರವು ಸೋಮವಾರ ಆಲೂರು ತಾಲೂಕಿನ ತಾಳೂರಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.

ಚಿತ್ರಕ್ಕೆ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ರವರು ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ಓರ್ವ ಬಡ ಹಾಗೂ ತಬ್ಬಲಿ ವಿದ್ಯಾರ್ಥಿನಿಯ ಸಾಧನೆ ಕುರಿತು ಚಲನಚಿತ್ರ ಮೂಡಿ ಬರುತ್ತಿದ್ದು ಪ್ರತಿ ವಿದ್ಯಾರ್ಥಿಗೆ ತನ್ನ ಭವಿಷ್ಯ ಕುರಿತು ಮಾರ್ಗದರ್ಶನ ನೀಡುವ ಚಿತ್ರವಾಗಿದೆ. ವಿಶೇಷವಾಗಿ ಕೊಟ್ರೇಶ್ ಎಸ್.ಉಪ್ಪಾರ್ ರವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಾಳೂರು ಗ್ರಾಮದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಓರ್ವ ವಿದ್ಯಾರ್ಥಿನಿ ಕುರಿತು ಚಲನಚಿತ್ರ ಮೂಡಿ ಬರುತ್ತಿರುವುದು ಹರ್ಷದಾಯಕ ಎಂದರು.

 ಮಹಾಲಕ್ಷ್ಮೀ ಥಿಯೇರ‍್ಸ್ ಮಾಲೀಕ ಹಾಗೂ ನಿರ್ಮಾಪಕರಾದ ಲಕ್ಷ್ಮೀಕುಮಾರ್ ಮಾತನಾಡಿ ಮಕ್ಕಳಿಗೆ ಸಂಬಂಧ ಪಟ್ಟ ಕಾದಂಬರಿ  ಇದಾಗಿದ್ದ ಕಾರಣ ಮಕ್ಕಳ ಸಿನಿಮಾ ಮಾಡಲು ಸೂಕ್ತ ಕಥವಸ್ತು ಎಂದು ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದೇನೆ. ಅಲ್ಲದೆ ಕಾದಂಬರಿಯಲ್ಲಿ ಪ್ರಸ್ತಾಪಿಸಿರುವ ಊರುಗಳಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲು ಚಿತ್ರತಂಡದೊಂದಿಗೆ ಚರ್ಚಿಸಿ ಚಿತ್ರೀಕರಣ ಮಾಡುತಿದ್ದೇವೆ. ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು ಸಂಪೂರ್ಣ ಚಿತ್ರೀಕರಣವನ್ನು ಸ್ಥಳೀಯ ಪ್ರತಿಭೆಗಳ ಮೂಲಕ ಚಿತ್ರವನ್ನು ಹೊರತರಲು ತೀರ್ಮಾನಿಸಿದ್ದೇನೆ ಎಂದರು.

ಯುವ ನಿರ್ದೇಶಕ ಅರುಣ್‌ಕುಮಾರ್ ಕರಡಿಗಾಲ ಮಾತನಾಡಿ ಕೊಟ್ರೇಶ್ ಎಸ್.ಉಪ್ಪಾರವರ ಪುಟ್ಟ ಗೂಡಿನ ಪಟ್ಟದರಸಿ ಕಾದಂಬರಿಯನ್ನು ಆದರಿಸಿ ಈ ಮಕ್ಕಳ ಚಿತ್ರವನ್ನು ಲಕ್ಷ್ಮಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಸ್ಥಳೀಯ ಕಲಾವಿದರು ಗಳನ್ನು ಬಳಸಿಕೊಳ್ಳುವ ಮೂಲಕ ಆಲೂರು ಹಾಗೂ ಬೇಲೂರಿನ ಸುತ್ತಮುತ್ತ ೩೦ ದಿನಗಳ ಕಾಲ ಮೊದಲನೇ ಹಂತದ ಚಿತ್ರೀಕರಣವನ್ನು ಚಿತ್ರ ತಂಡ ಮಾಡಲಿದೆ ಎಂದರು.

ಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣ  ಚಂದು, ಸಂಕಲನ ಸ್ಟಾನಿ, ಸಹನಿರ್ದೇಶನ  ಶರತ್ ಬಾಬು, ಅನಿಲ್ ಕುಮಾರ್ ಇದ್ದು ಮೊದಲ ಬಾರಿಗೆ ಅರುಣ್ ಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ತಾರಾಗಣದಲ್ಲಿ ಸಿದ್ದು ಮಂಡ್ಯ, ಪೂಜಾ ರಘುನಂದನ್, ಕುಮಾರಿ ಶರಣ್ಯ, ಮುರುಳಿ ಹಾಸನ್, ಗ್ಯಾರಂಟಿ ರಾಮಣ್ಣ, ಎಚ್.ಎಸ್.ಪ್ರಭಾಕರ್, ಅಂಬಿಕಾ, ತಾಳೂರು ಧರ್ಮ, ವಿದ್ಯಾರ್ಥಿಗಳಾದ ಸ್ಫೂರ್ತಿ, ದೀಪಿಕಾ, ಸಿಂಚನ, ಶ್ರೇಯಸ್, ಹೇಮಲತಾ, ವೀಣಾ, ಲಕ್ಷ್ಮಿ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಕಲಾವಿದರು ಇದ್ದಾರೆ.

ಮೂಹೂರ್ತ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಹಾಗೂ ಗೌರವಾಧ್ಯಕ್ಷ ಚಿಕ್ಕೇಗೌಡ, ಊರಿನ ಮುಖಂಡರಾದ ಮೋಹನ್ ಕುಮಾರ್, ಧರ್ಮ ಟಿ.ಇ, ಜಿ.ಕೆ.ವೆಂಕಟೇಶ್, ಲಾಯರ್ ಮಂಜುನಾಥ್, ಗ್ರಾ.ಸ.ಹರೀಶ, ಮೋಹನ, ದಿನೇಶ, ಪುನೀತ, ಲೋಹಿತ, ಮಹೇಶ, ಚೇತನ್, ಪ್ರದೀಪ, ಚಂದನ, ಯೋಗೇಶ್ ಟಿ.ಎಚ್.ಮಂಜಯ್ಯ, ಈರಯ್ಯ, ಕೋಡಿಗಯ್ಯ, ಭದ್ರಯ್ಯ, ದಾಸಯ್ಯ, ಕುಮಾರ್, ಕಲಾವಿದರಾದ ಎಚ್.ಎಸ್.ಪ್ರಭಾಕರ್, ಗ್ಯಾರಂಟಿ ರಾಮಣ್ಣ, ಪೂಜಾ ರಘುನಂದನ್, ಸಾಹಿತಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜು, ವಾಸು ಸಮುದ್ರವಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಆಲೂರು ತಾ.ತಾಳೂರು ಗ್ರಾಮದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ "ಪುಟ್ಟಗೂಡಿನ ಪಟ್ಟದರಸಿ" ಮಕ್ಕಳ ಚಲನಚಿತ್ರಕ್ಕೆ ಶುಭ ಮಹೂರ್ತ ನಡೆಯಿತು. ಬಿಇಒ ಎ.ಜೆ.ಕೃಷ್ಣೇಗೌಡ, ಶಿಕ್ಷಕ ಹಾಗೂ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಮತ್ತು ಚಿತ್ರ ತಂಡದವರು ಹಾಜರಿದ್ದರು.