ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರಾಗಿ ಆಯ್ಕೆ ಮಾಡುವಂತೆ ಮನವಿ
ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರಾಗಿ ಸೇರ್ಪಡೆಗೊಳಿಸುವ ಕುರಿತು ವಿನಮ್ರ ಮನವಿ.
ಗೌರವಾನ್ವಿತ ನಾಯಕರುಗಳಿಗೆ:
೧. ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
೨. ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ
ಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC), ನವದೆಹಲಿ.
೩. ಮಾನ್ಯ ಶ್ರೀಮತಿ ಸೋನಿಯಾ ಗಾಂಧಿಯವರಿಗೆ
ಹಿರಿಯ ನಾಯಕರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ನವದೆಹಲಿ.
೪. ಮಾನ್ಯ ಶ್ರೀ ರಾಹುಲ್ ಗಾಂಧಿಯವರಿಗೆ
ವಿರೋಧ ಪಕ್ಷದ ನಾಯಕರು, ಲೋಕಸಭೆ ಹಾಗೂ ಹಿರಿಯ ನಾಯಕರು, ನವದೆಹಲಿ.
೫. ಮಾನ್ಯ ಶ್ರೀ ಕೆ. ಸಿ. ವೇಣುಗೋಪಾಲ್ ಅವರಿಗೆ
ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, AICC, ನವದೆಹಲಿ.
ಇವರಿಗೆ
ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರ ಸೇವೆ, ನಾಯಕತ್ವ ಮತ್ತು ಜನಪರ ಕಾರ್ಯಗಳನ್ನು ಪರಿಗಣಿಸಿ, ಮುಂಬರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕಾಗಿ ಈ ಮೂಲಕ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.
ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಘೋಷಿಸುವುದಕ್ಕೂ ಮುನ್ನವೇ ನಗರದಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ, ನಗರವನ್ನು ಆಧುನಿಕ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರ ಪಾತ್ರ ಮಹತ್ವದ್ದಾಗಿದೆ. ದಾವಣಗೆರೆ ನಗರವನ್ನು "ಕರ್ನಾಟಕದ ಆಕ್ಸ್ಫರ್ಡ್ ಸಿಟಿ" ಎಂದು ದೇಶಾದ್ಯಂತ ಗುರುತಿಸುವಂತೆ ಮಾಡುವಲ್ಲಿ, ಲಿಂಗೈಕ್ಯರಾದ ಹಿರಿಯ ಮುತ್ಸದ್ದಿ ಶ್ರೀ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಇವರ ಕೊಡುಗೆಯೂ ಅನನ್ಯವಾಗಿದೆ.
ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ದಾವಣಗೆರೆ ಜಿಲ್ಲೆಯ ಪ್ರಗಿಗೆ ಇವರ ಕುಟುಂಬದ ಸೇವೆ ಅಪಾರವಾಗಿದೆ. ಕೋವಿಡ್ ಮಹಾಮಾರಿಯಂತಹ ಕಠಿಣ ಸಂದರ್ಭದಲ್ಲಿ ಜಿಲ್ಲೆಯ ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಇವರು ಮುಂಚೂಣಿಯಲ್ಲಿ ನಿಂತು ಕೈಗೊಂಡ ಕಾರ್ಯಗಳು ಜನಮನದಲ್ಲಿ ಶಾಶ್ವತವಾಗಿ ಉಳಿದಿವೆ. ಅಲ್ಲದೆ, ಎಸ್. ಎಸ್. ಫೌಂಡೇಶನ್ ಮೂಲಕ ಬರಗಾಲದ ಸಂದರ್ಭಗಳಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ನೆರವುಗಳನ್ನು ಜನರಿಗೆ ತಲುಪಿಸುವ ಮಾನವೀಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರು ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾಗಿ, ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಇಲಾಖೆಗಳ ಆಡಳಿತವನ್ನು ಚುರುಕುಗೊಳಿಸಿ ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಅವರಿಗೆ ವಹಿಸಲಾದ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ನಿರ್ವಹಿಸಿರುವ ಅಪಾರ ಆಡಳಿತಾತ್ಮಕ ಅನುಭವ ಅವರಿಗಿದೆ.
ದಾವಣಗೆರೆ ಜಿಲ್ಲೆ ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸುವಲ್ಲಿ ಹಾಗೂ ಪಕ್ಷದ ಸಂಘಟನೆಯನ್ನು ಸದೃಢಗೊಳಿಸುವಲ್ಲಿ ಅವರ ಕುಟುಂಬದ ಕೊಡುಗೆ ಐತಿಹಾಸಿಕವಾದದ್ದು. ಅವರ ರಾಜಕೀಯ ಅನುಭವ, ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಜನಸೇವೆಯ ಬದ್ಧತೆ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಮತ್ತು ಪಕ್ಷದ ಬಲವರ್ಧನೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ನಮ್ಮ ದೃಢ ನಂಬಿಕೆಯಾಗಿದೆ.
ಆದ್ದರಿಂದ, ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಶ್ರೀ ಎಸ್. ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರಾಗಿ ಸೇರ್ಪಡೆಗೊಳಿಸಿ, ಅವರ ಅನುಭವ ಮತ್ತು ನಾಯಕತ್ವವನ್ನು ರಾಜ್ಯದ ಜನಸೇವೆಗೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಹೈಕಮಾಂಡ್ ಹಾಗೂ ಮಾನ್ಯ ಮುಖ್ಯಮಂತ್ರಿಗಳಲ್ಲಿ ಅತ್ಯಂತ ವಿನಮ್ರವಾಗಿ ಪ್ರಾರ್ಥಿಸುತ್ತೇವೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ,
(ಹೆಚ್ ಮಲ್ಲಿಕಾರ್ಜುನ ವಂದಾಲಿ)
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ
ದಾವಣಗೆರೆ ಜಿಲ್ಲೆ
What's Your Reaction?