ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ-ಡಾ. ಮಾನಸ.
ವಿದ್ಯಾರ್ಥಿಗಳೇ ನೀವು ನಿಮ್ಮ ಪಠ್ಯ ಪುಸ್ತಕಗಳನ್ನು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ. ಆಗ ಪುಸ್ತಕ ಓದು ನಿಮ್ಮ ಮಸ್ತಕ ತಲುಪಿ ಓದಿದ್ದು ಅಥ೯ವಾಗುವುದು ಎoದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಕಿವಿಮಾತು ಹೇಳಿದರು.
ಅವರು ಹಾಸನದ ಗಂಧದ ಕೋಠಿ ಆವರಣ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರಧಾನ) ಕನ್ನಡ ಪುಸ್ತಕ ಪ್ರಾಧಿಕಾರದಿಂದ ಏರ್ಪಡಿಸಿದ್ದ ನಾ ಮೆಚ್ಚಿದ ಪುಸ್ತಕ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವು ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕೃತಿ ಪುಸ್ತಕ ಓದುವ ಅಭಿರುಚಿ ಬೆಳಸಲು ರೂಪಿಸಲ್ಪಟ್ಟಿದೆ. ನೀವು ವಿದ್ಯಾರ್ಥಿನಿಯರು ನಿಮ್ಮ ಗೆಳತಿಯರು ಪುಸ್ತಕ ಓದಿಕೊಂಡು ಬಂದು ಹೇಗೆ ವಿಮರ್ಶೆ ಮಂಡಿಸಿದರು ಎಂಬುದನ್ನು ನೋಡಿದಿರಿ. ಉಳಿದವರು ಈ ದಿಶೆಯಲ್ಲಿ ಪ್ರಯತ್ನ ಮಾಡಿ, ಪ್ರಾರಂಭದಲ್ಲಿ ಅಳುಕು ಭಯ ಸಹಜ. ಹಾಗೆಂದು ಹೆದರಿ ಹಿಂದೆ
ಸರಿಯಬೇಡಿ.. ಪ್ರಯತ್ನಯಿಲ್ಲದೇ ಯಾವುದೇ ಪ್ರತಿಫಲ ದೊರೆಯುವುದಿಲ್ಲ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ಮಾತನಾಡಿ ವಿದ್ಯಾರ್ಥಿಗಳು ಹಳೆ ಬೇರಿನ ಪುಸ್ತಕ ಜ್ಞಾನದಿಂದ ಆಧುನಿಕ ತಂತ್ರಜ್ಞಾನದ ಮೊಬೈಲ್ ಜ್ಞಾನದ ಚಿಗುರಿನೊಂದಿಗೆ ರಸಫಲಭರಿತ ಸಮಾಜಮುಖಿ ಸಾಧನೆಗಳ ದಾರಿ ಕಡೆ ಮುಖ ಮಾಡಬೇಕಾಗಿದೆ. ಪುಸ್ತಕ ಬಿಟ್ಟು ಮೊಬೈಲ್ ಹಿಡಿಯಬೇಡಿ. ಮೊಬೈಲ್ ಚೀಲದಲ್ಲಿರಲಿ.ಪುಸ್ತಕ ಕೈಯಲ್ಲಿರಲಿ. ಇದು ಪುಸ್ತಕ ಜ್ಞಾನ ಸಂಸ್ಕೃತಿ ಬಿತ್ತುವ ಸರ್ವರ ಕಾಲವಾಗಿದೆ. ಅದರ ಬೀಜವೆ ನಾ ಮೆಚ್ಚಿದ ಪುಸ್ತಕ ಕನ್ನಡ ಪ್ರಾಧಿಕಾರ ಕಾರ್ಯಕ್ರಮದ ಸದುದ್ದೇಶ ಎಂದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ತಾವು ಓದಿನ ದಿನಗಳಲ್ಲಿ ಪಠ್ಯಕ್ಕಿಂತ ಹೆಚ್ಚಾಗಿ ಕಥೆ, ಕಾದಂಬರಿ ಓದುವ ಹವ್ಯಾಸ ರೂಢಿಸಿಕೊಂಡ ಕಾರಣ ಆಗ ನಾನೂ ಕೂಡ ಸಾಹಿತಿ ಆಗಬೇಕೆಂಬ ಕನಸು ಕಂಡೆ. ಸತತ ಓದು, ನಿರಂತರ ಬರವಣಿಗೆಯಿಂದ ಆ ಕನಸು ಕೊಂಚ ಸಾಕಾರಗೊಂಡಿದೆ. ಈ ವರೆಗೆ 60ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದೆ. ಓದಿನ
ಜ್ಞಾನರ್ಜನೆ ನಮಗೆ ಎಂದಿಗೂ ಫಲ ನೀಡಿಯೇ ನೀಡುವುದು ಎಂದರು.
ವಿಶೇಷ ಉಪನ್ಯಾಸ ನೀಡಿದ ಪ್ರೊ. ಎಂ ಶಂಕರ್, ಪ್ರಾಧ್ಯಾಪಕರು, ಕನ್ನಡ ವಿಭಾಗ, ಹೇಮಗಂಗೋತ್ರಿ ವಿಶ್ವವಿದ್ಯಾನಿಲಯ ಮಾತನಾಡಿ ಇವತ್ತು ವಿದ್ಯಾರ್ಥಿಗಳು ಅನೇಕ ಸಾಧಕರ ವ್ಯಕ್ತಿ ಪರಿಚಯವನ್ನು ನಿಮ್ಮ ಮಿತಿಯಲ್ಲಿ ಬಹು ಚೆನ್ನಾಗಿಯೇ ಮಾಡಿರುವಿರಿ ಎಂದು ಮೆಚ್ಚುಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಸಿರಿ ಭೂವಲಯ ಒಳಗೊಂಡು ಕನ್ನಡದ ಕೆಲವು ಮಹತ್ವದ ಕೃತಿಗಳ ಬಗ್ಗೆ ಮಾಹಿತಿ ನೀಡಿ ಬಿಡುವಿನ ವೇಳೆ ಓದಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ಜಿ.ಡಿ. ಅನ್ನಪೂರ್ಣ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇದೊಂದು ಉಪಯುಕ್ತ ಕಾರ್ಯಕ್ರಮ. ಇಂತಹ ಪಾಂಡಿತ್ಯಪೂರ್ಣ ವಿದ್ವಾಂಸರ ಉಪನ್ಯಾಸಕರ ಸಾಹಿತಿಗಳ ಅನುಭವಪೂರ್ಣ ಮಾತು, ಮಾಹಿತಿ ಜೊತೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ವಿದ್ವಾಂಸರ ಎದುರು ಪ್ರದರ್ಶಿಸಿದ್ದು ಖುಷಿಯಾಗಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿನಿಯರಾದ ನಿಖಿತ್ ಎಂ.ಹೆಚ್. ಜಾನ್ಸಿ ರಾಣಿ, ಪೂನಂ, ಅಂಜಲಿ, ಗುಣವತಿ, ಸುರಕ್ಷ, ಶೃತಿ, ಮೋಕ್ಷ, ಯಶೋಧ ನಾ ಮೆಚ್ಚಿದ ಪುಸ್ತಕ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮವಾಗಿ ಮಾತನಾಡಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಂದ ಪುಸ್ತಕ ಮತ್ತು ಅಭಿನಂದನಾ ಪತ್ರ ಪಡೆದರು. ವೇದಿಕೆಯಲ್ಲಿ ಹಿರಿಯ ಕನ್ನಡ ಉಪನ್ಯಾಸಕರು ವೆಂಕಟೇಶ್, ಸಾಹಿತಿಗಳಾದ ಡಾ. ಬರಾಳು ಶಿವರಾಮ, ಸುಂದರೇಶ್ ಡಿ. ಉಡುವಾರೆ, ಸಿರಿಕನ್ನಡ ದಿನಪತ್ರಿಕೆ ಸಂಪಾದಕರು ಆನಂದ ಪಟೇಲ್ ನೆಲ್ಲಿಗೆರೆ, ಕವಿ ಎನ್.ಎಲ್. ಚನ್ನೇಗೌಡ ಇದ್ದರು.
ವಿದ್ಯಾರ್ಥಿನಿ ಯಶಸ್ವಿನಿ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅರ್ಥಶಾಸ್ತ್ರ ಉಪನ್ಯಾಸಕರು ಪ್ರಭಾ ಆರ್. ವಂದಿಸಿದರು. ಇತಿಹಾಸ ಉಪನ್ಯಾಸಕರು ಮಂಜುಳ ಆರ್. ಕಾರ್ಯಕ್ರಮ ನಿರೂಪಿಸಿದರು.