ನಮ್ಮ ಶಾಸಕಿಗೆ ಅಪಮಾನ ಮಾಡಿದರೆ ಸಹಿಸಲ್ಲ: ಮೋಹನ್ ಕೃಷ್ಣ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು
ಬೇತಮಂಗಲ: ಶಾಸಕರ ಗೌರವಕ್ಕೆ ಧಕ್ಕೆ ತಂದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ನಾಗರಾಜ್ ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬೆಟ್ಕೂರು ಗ್ರಾಮದಲ್ಲಿ ಊರ ಹಬ್ಬದ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆ ಸಮಾಜ ಸೇವಕ ಮೋಹನ್ ಕೃಷ್ಣ ಅವರಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಒಬ್ಬ ಮಹಿಳಾ ಶಾಸಕಿಯ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯವಿರಬೇಕು. ಒಂದು ಹೆಣ್ಣು ಮಗುವಿನ ಬಗ್ಗೆ ಮಹಿಳೆಯ ಬಗ್ಗೆ ಮಾತನಾಡುವಾಗ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ರಾಜಕೀಯ ವಿರೋಧ ಏನೇ ಇದ್ದರೂ ಅದನ್ನು ಘನತೆಯಿಂದ ವ್ಯಕ್ತಪಡಿಸಬೇಕೇ ಹೊರತು ವೈಯಕ್ತಿಕ ನಿಂದನೆ ಅಥವಾ ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
*ಗೌರವಕ್ಕೆ ಧಕ್ಕೆ ತಂದರೆ ಸಹಿಸಲ್ಲ:* ಶಾಸಕಿ ರೂಪಕಲಾ ಅವರ ಗೌರವ ಹಾಗೂ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮುಂದುವರಿದರೆ ಸಹಿಸುವುದಿಲ್ಲ ಮುಂದಿನ ದಿನಗಳಲ್ಲಿ ತಮಗೆ ಕ್ಷೇತ್ರದ ಮಹಿಳೆಯರೇ ತಕ್ಕ ಪಾಠ ಕಳಿಸುತ್ತಾರೆಂದರು.
*ಕ್ಷಮಾಯಾಚನೆಗೆ ಒತ್ತಾಯ:* ಶಾಸಕರ ವಿರುದ್ಧ ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ತಿಳಿಸಿದರು.
*ನಾಲಿಗೆ ಹಿಡಿತದಲ್ಲಿರಲಿ:* ಒಬ್ಬ ಜನಪ್ರತಿನಿಧಿ ಹಾಗೂ ಹೆಣ್ಣು ಮಗುವಿನ ಬಗ್ಗೆ ಮಾತನಾಡುವಾಗ ಮೋಹನ್ ಕೃಷ್ಣ ಅವರು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ವೈಯಕ್ತಿಕ ನಿಂದನೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಾರ್ಯಕರ್ತರು ಎಚ್ಚರಿಸಿದರು.
*ಚುನಾವಣೆಯಲ್ಲಿ ತಾಕತ್ತು ಪ್ರದರ್ಶಿಸಲಿ:* ಅವಹೇಳನಕಾರಿ ಹೇಳಿಕೆಗಳ ಮೂಲಕ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟು ಧೈರ್ಯವಿದ್ದರೆ ನೇರವಾಗಿ ಚುನಾವಣಾ ಕಣಕ್ಕಿಳಿದು ತಮ್ಮ ಶಕ್ತಿ ಪ್ರದರ್ಶನ ಮಾಡಲಿ ಎಂದು ಸವಾಲು ಎಸೆದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಮುಖಂಡರಾದ ಮುನೇಗೌಡ, ಶ್ರೀನಿವಾಸ್ ಗೌಡ ಆಂಜಪ್ಪ, ಆನಂದ್ ಗೌಡ, ಗಂಗಿರೆಡ್ಡಿ, ನಲ್ಲೂರು ಶಂಕರ್, ರಾಮಕೃಷ್ಣಪ್ಪ, ರಮಣರೆಡ್ಡಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?