ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ
ಬೆಂಗಳೂರು, ಮೇ 29: ಸಾರ್ವಜನಿಕ ವಾಹನಗಳಿಗೆ ಹಾನಿ ಮಾಡುವ ದುರುದ್ದೇಶದಿಂದ ಸಾರ್ವಜನಿಕ ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹರಡುತ್ತಿರುವ ಕಿಡಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ!
ಬೆಂಗಳೂರು ಮಹಾನಗರವು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದ್ದು ಕಛೇರಿ ಕೆಲಸ, ವ್ಯವಹಾರ, ಉದ್ದಿಮೆ, ತುರ್ತು ಸೇವೆಯ ವಾಹನಗಳು ಸೇರಿದಂತೆ ಪ್ರತಿದಿನ ನಗರದಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿರುತ್ತವೆ, ಆದರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ಪಂಕ್ಚರ್ ಶಾಪ್ನ ಮಾಲೀಕರು/ವ್ಯಕ್ತಿಗಳು ಕಿಡಗೇಡಿಗಳು ಅಡ್ಡದಾರಿಯಲ್ಲಿ ಹಣ ಮಾಡುವ ದುರುದ್ದೇಶದಿಂದ ಪ್ರತಿದಿನ ಸಾರ್ವಜನಿಕ ರಸ್ತೆಗಳಲ್ಲಿ, ಪ್ರಮುಖ ರಸ್ತೆ, ಸುರಂಗ ಮಾರ್ಗ, ಪ್ಲ ಓವರ್ಗಳ ಮೇಲೆ ಸೇರಿದಂತೆ ವಾಹನಗಳ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಕಬ್ಬಿಣದ ಮೊಳೆಗಳನ್ನು ಹರಡಿ ವಾಹನಗಳು ಪಂಕ್ಚರ್ ಆಗುವಂತೆ ಮಾಡಿ ನಂತರ ಪಂಕ್ಚರ್ ಹಾಕಲು ಸಾರ್ವಜನಿಕರಿಂದ ಅಧಿಕ ಹಣಕ್ಕೆ ಒತ್ತಾಯಿಸಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈ ರೀತಿಯ ದುರುದ್ದೇಶದಿಂದ ವಾಹನಗಳು ಅಪಘಾತಕ್ಕೊಳಗಾಗುವ ಸಂಭವಗಳು ಹೆಚ್ಚಿರುತ್ತದೆ ಅಲ್ಲದೇ ತುರ್ತು ಸೇವೆಯ ವಾಹನಗಳಾದ ಅಂಬುಲೆನ್ಸ್ ಗಳು ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ವಿಫಲವಾಗಿ ರೋಗಿಗಳು ಸಾವನ್ನಪ್ಪುವ ಸಂಭವವು ಅಧಿಕವಾಗಿರುತ್ತದೆ, ಅಲ್ಲದೇ ತುರ್ತು ಸೇವೆಯ ಅಗ್ನಿಶಾಮಕ, ಪೊಲೀಸ್ ವಾಹನಗಳಿಗೆ ಹಾನಿಯಾಗುವುದರಿಂದ ಮುಂದಾಗುವ ಅನಾಹುತಗಳನ್ನು, ವಿಪತ್ತುಗಳನ್ನು ನಿರ್ವಹಿಸಲು ವಿಫಲವಾಗುವ ಸಂಭವಗಳಿದ್ದು ಹಾಗೂ ಎಲ್ಲಾ ಸಾರ್ವಜನಿಕ ವಾಹನಗಳು ನಿಗದಿತ ಸಮಯದಲ್ಲಿ ಕಛೇರಿಗಳಿಗೆ, ಮನೆಗಳಿಗೆ, ಶಾಲೆ-ಕಾಲೇಜ್ ಗಳಿಗೆ ಹಾಗೂ ಇತರೆ ಕೆಲಸಗಳಿಗೆ ತಲುಪಲಾಗದೇ ಮಾನಸಿಕ ಒತ್ತಡಕ್ಕೊಳಗಾಗುತ್ತಿರುವುದಲ್ಲದೆ ಅನಗತ್ಯ ಹಣ ವ್ಯಯಿಸುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಪ್ರತಿದಿನ ಸ್ವತಃ ಕಾರ್ಯಾಚರಣೆಗಳನ್ನು ನಡೆಸಿ ಸಾಮಾಜಿಕ ತಾಣ ಹಾಗೂ ಮಾಧ್ಯಮದಲ್ಲಿ ವರದಿ ಮಾಡುತ್ತಿರುತ್ತಾರಲ್ಲದೇ ಹಲವು ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಫಿಯಾವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ, ಈ ಚಟುವಟಿಕೆಗಳು ನಗರದ ಕೆಲವು ಪೊಲೀಸ್ ಠಾಣೆಯ ಮುಂಭಾಗದ ರಸ್ತೆಗಳಲ್ಲೇ ರಾಜಾರೋಷವಾಗಿ ನಡೆಸುತ್ತಿರುವುದು ಸಹ ವರದಿಯಾಗಿದ್ದು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ನಗರದ ಸಾರ್ವಜನಿಕ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿ ಹಣ ವಸೂಲಿ ಮಾಡುವ ದುರುದ್ದೇಶದಿಂದ ಕಬ್ಬಿಣದ ಮೊಳೆಗಳನ್ನು ಹರಡುತ್ತಿರುವ (ಮೊಳೆ ಮಾಫಿಯಾ) ಕಿಡಗೇಡಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ನಗರದ ಆಯಾ ಠಾಣೆ ವ್ಯಾಪ್ತಿಯ ಎಲ್ಲಾ ಪಂಚರ್ ಶಾಪ್ನ ಮಾಲೀಕರಿಗೆ ಗಂಭೀರ ಎಚ್ಚರಿಕೆಗಳನ್ನು ನೀಡಿ ಅವರ ಮೇಲೆ ನಿಗಾವಹಿಸುವಂತೆ ಪತ್ರ ಬರೆದಿದ್ದಾರೆ
What's Your Reaction?