ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿ: ಎನ್ಎಚ್ಎಐ ವಿರುದ್ಧ ರೈತರ ಆಕ್ರೋಶ
ಸರ್ವಿಸ್ ರಸ್ತೆ ನಿರ್ಮಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ.
ಬೇತಮಂಗಲ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಹೆದ್ದಾರಿ ಕಾಮಗಾರಿ ವೇಳೆ ರೈತರಿಗೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಐಎ ) ನಡೆ ಖಂಡಿಸಿ, ನೂರಾರು ಸ್ಥಳೀಯ ರೈತರು ಸುಂದರಪಾಳ್ಯ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತರು, ಹೆದ್ದಾರಿ ಕಾಮಗಾರಿ ಆರಂಭವಾಗುವ ಸಮಯದಲ್ಲಿ, ಸ್ಥಳೀಯ ರೈತರು ತಮ್ಮ ತೋಟ-ತುಡಿಕೆಗಳಿಗೆ ಮತ್ತು ಕೃಷಿ ಭೂಮಿಗೆ ಸುಲಭವಾಗಿ ತೆರಳಲು ಅನುವಾಗುವಂತೆ ಸೂಕ್ತ ಸೇವಾ ರಸ್ತೆ (ಸರ್ವಿಸ್ ರೋಡ್) ನಿರ್ಮಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇದೀಗ ಕಾಮಗಾರಿ ಮುಕ್ತಾಯ ವಾದಂತೆ , ರೈತರು ಓಡಾಡುತ್ತಿದ್ದ ಹಳೆಯ ದಾರಿಗಳನ್ನೂ ಸಹ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೊಸಕೋಟೆಯಿಂದ ಆಂಧ್ರ ಗಡಿ ಭಾಗದವರೆಗೂ ರೈತರು ಕಳೆದ ಕೆಲವು ದಿನಗಳಿಂದ ನಮ್ಮ ಜಮೀನಿನ ಸಂರಕ್ಷಣೆಗಾಗಿ ಮತ್ತು ಸರ್ವಿಸ್ ರಸ್ತೆಗಾಗಿ ಈಗಾಗಲೇ ಹೊರಟಾಗಳನ್ನು ಮಾಡುತ್ತಾ ಜಿಲ್ಲಾಧಿಕಾರಿಗಳಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈಗಾಗಲೇ ಅನೇಕ ಮನವಿಗಳನ್ನು ಸಲ್ಲಿಸಿದ್ದು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಬೆಂಗಳುರು- ಚೆನ್ನೈ ಹೆದ್ದಾರಿ ರಸ್ತೆಯು ಕೇವಲ ಐಷಾರಾಮಿ ಕಾರು ಬಸ್ ಹೊಡಾಡುವವರಿಗೆ ಮಾತ್ರ ಬಳಕೆಯಾಗುತ್ತಿದೆ ನಮ್ಮಂಥ ರೈತರಿಗೆ ತುಂಬಾ ನಷ್ಟವಾಗಿದೆ ರೈತರಿಂದ ಜಮೀನು ಖರೀದಿ ಮಾಡಿ ಇದೀಗ ರೈತರ ತೋಟಗಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದೆ ಬಂಡಿ ಕಾಲು ದಾರಿಗಳನ್ನು ಸಹ ಮುಚ್ಚಿಲ್ಪಟ್ಟಿದೆ ಇದು ಯಾವ ನ್ಯಾಯ ಎಂದು ರೈತರು ಅಳಲುತೋಡಿಕೊಂಡರು.
ಹೆದ್ದಾರಿ ಪ್ರಾಧಿಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು, ಸ್ಥಳದಲ್ಲಿಯೇ ಶಾಂತಿಯುತ ಧರಣಿ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಬೇತಮಂಗಲ ಪೊಲೀಸ್ ವೃತ್ತ ನಿರೀಕ್ಷಕರಾದ ಎಸ್.ಆರ್. ಜಗದೀಶ್ ಅವರ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಶಾಂತಿಯುತ ಹೋರಾಟ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರತಿ 2ನೇ ಶನಿವಾರ ಹೋರಾಟ ಮುಂದುವರೆಯತ್ತೆ: ಒಂದು ವೇಳೆ ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ 2ನೇ ಶನಿವಾರ ನಿರಂತರವಾಗಿ ಹೋರಾಟ ಮತ್ತು ಧರಣಿಯನ್ನು ಮುಂದುವರಿಸುವುದಾಗಿ ರೈತ ಮುಖಂಡರು ಇದೇ ವೇಳೆ ಎಚ್ಚರಿಕೆ ನೀಡಿದರು.
ರೈತರ ಬೇಡಿಕೆಗಳು: ತೋಟಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಗಳನ್ನು ತಕ್ಷಣವೇ ಆರಂಭಿಸಬೇಕು, ಮತ್ತು ರೈತರಿಂದ ರಸ್ತೆ ನಿರ್ಮಿಸಲು ಪಡೆದ ಜಮೀನಿನ ಪರಿಹಾರ ಮೊತ್ತ ಇದುವರೆಗೂ ವಿತರಿಸಿಲ್ಲ ಕೂಡಲೇ ಕೇಂದ್ರ ಸರ್ಕಾರ ಎಚೆತ್ತುಕೊಂಡು ರೈತರಿಗೆ ಬಾಕಿ ಇದ್ದ ಮೊತ್ತವನ್ನು ವಿತರಿಸಬೇಕು, ಮಳೆ ನೀರು ನಮ್ಮ ಕೃಷಿ ಜಮೀನುಗಳಿಗೆ ನುಗ್ಗಿ ನಾಶವಾಗದಂತೆ ಸೂಕ್ತ ಒಳಚರಂಡಿ ವ್ಯವಸ್ಥೆ ಮತ್ತು ನೀರು ಅರಿಯುವ ಮಾರ್ಗಗಳನ್ನು ನಿರ್ಮಿಸಿಕೊಡಬೇಕು ಎಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
ಪೊಲೀಸ್ ಬಿಗಿ ಬಂದೋಬಸ್ತ್: ರೈತರ ತೀವ್ರ ಪ್ರತಿಭಟನೆ ಗಮನಿಸಿ ಪ್ರತಿಭಟನಾ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಪೊಲೀಸರು ಬಿಗಿ ಬಂದೋ ಬಸ್ತ್ ಕಲ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಎಪಿಎಂಸಿ ಯುವರಾಣಿ ವೆಂಕಟಚಲಪತಿ, ಬುಜ್ಜಿ ನಾಗೇಂದ್ರ, ಮುರಳಿ ಕೃಷ್ಣ ವಕೀಲ ಸುಬ್ರಮಣಿ ಕೃಷ್ಣಮೂರ್ತಿ ಟಿಪಿ ವೆಂಕಟರಾಮ್ ಸುನಿಲ್ ರಾಮಣ್ಣ ಜಯರಾಮ್ ರೆಡ್ಡಿ, ಚಂದ್ರಯ್ಯ, ರೆಡ್ಡಪ್ಪ ಪುರುಷೋತ್ತಮ್ , ನಾರಾಯಣಪ್ಪ, ಸೇರಿದಂತೆ ನೂರಾರು ರೈತರು ಇದ್ದರು.
ಕೋಟ್ 01
ರೈತ ದೇಶದ ಬೆನ್ನಲುಬು ಎಂದು ಹೇಳುತ್ತಾರೆ ರಸ್ತೆಗಾಗಿ ರೈತರಿಂದ ಜಮೀನು ಪಡೆದು ಈಗ ತೋಟಕ್ಕೆ ಹೋಗುವ ರಸ್ತೆಗಳನ್ನೇ ಮುಚ್ಚಿದರೆ ರೈತರು ಕೃಷಿ ಮಾಡುವುದು ಹೇಗೆ ಕೊಟ್ಟ ಮಾತಿನಂತೆ ರೈತರಿಗೆ ಸರ್ವಿಸ್ ರಸ್ತೆ ಮಾಡಿಕೊಡಬೇಕು
ಜೈ ಸಿಂಹ ಕೃಷ್ಣಪ್ಪ
ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು
ಕೋಟ್ 02
ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಿಗೆ ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸಲು ರೈತರ ಪರ ಮನವಿ ಪತ್ರ ಸಲ್ಲಿಸಲಾಗಿದೆ ಸರ್ಕಾರವು ರೈತರ ಸಮಸ್ಯೆಯನ್ನು ಪರಿಗಣಿಸಿ ಸ್ಪಂದಿಸಬೇಕು ಎಂದರು
ಡಾ.ಎಂ.ರೂಪಕಲಾ
ಸ್ಥಳೀಯ ಶಾಸಕರು ಕೆಜಿಎಫ್ ವಿಧಾನಸಭಾ ಕ್ಷೇತ್ರ
What's Your Reaction?