ಆಸೆ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ:ತಾ.ಪಂ ಇಓ ಕರೆ
ಕನಕಗಿರಿ: ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಆಸೆ ಆಮಿಷಗಳಿಗೆ ಒಳಗಾಗದೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತವನ್ನು ಚಲಾಯಿಸುವಂತೆ ಕೂಲಿಕಾರರಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಿರೇಂದ್ರಕುಮಾರ್ ಅವರು ಹೇಳಿದರು.
ತಾಲೂಕಿನ ನವಲಿ ಹಾಗೂ ಜೀರಾಳ ಗ್ರಾ.ಪಂ ವತಿಯಿಂದ ಗ್ರಾಮದ ಕೂಲಿಕಾರರಿಗೆ ನೀಡಲಾಗಿದ್ದ ಚೆಕ್ ಡ್ಯಾಂ & ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಪಂಚದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಒಂದು ಪವಿತ್ರವಾದ ವರ, ಸಂವಿಧಾನ ನಮ್ಮೆಲ್ಲರಿಗೂ ನೀಡಿರುವ ಒಂದು ಹಕ್ಕು. ಅದನ್ನು ಎಲ್ಲರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು ಎಂದರು.
ನಂತರ ಸಹಾಯಕ ನಿರ್ದೇಶಕ ಚಂದ್ರಶೇಖರ್ ಬಿ ಕಂದಕೂರ್ ಅವರು ಮಾತನಾಡಿ, ಬೇಸಿಗೆ ಇರುವುದರಿಂದ ಯಾರು ಗುಳೆ ಹೋಗದೇ, ನಿಮ್ಮೂರಲ್ಲೇ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡೆಯಲು ತಿಳಿಸಿದರು. ಜೊತೆಗೆ ಸಮುದಾಯ ಕಾಮಗಾರಿಯಷ್ಟೇ ಅಲ್ಲದೇ, ವೈಯಕ್ತಿಕ ಕಾಮಗಾರಿಗಳ ಪ್ರಯೋಜನವನ್ನು ಪಡೆಯಲು ಕೂಲಿಕಾರರಿಗೆ ತಿಳಿಸಿದರು.
ಬಳಿಕ ಗ್ರಾ.ಪಂ ಪಿಡಿಓ ರವರು ಕೂಲಿಕಾರರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ವೇಳೆ ಗ್ರಾ.ಪಂ ಪಿಡಿಓ ವೀರಣ್ಣ ನಕ್ರಳ್ಳಿ, ಲಕ್ಷಣ್, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ, ಡಿಇಓ ಕನಕರಾಯ, ಬಿಎಫ್.ಟಿ ಅಮರೇಶ್, ಗ್ರಾಮ ಕಾಯಕ ಮಿತ್ರ ಉಮಾದೇವಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿ ಹಾಗೂ ಕೂಲಿಕಾರರು ಹಾಜರಿದ್ದರು.