ಸುದ್ದಿಕಿರಣ ವರದಿ
ಮಂಗಳವಾರ, ಮೇ 3
ಮೇ 4ರಂದು ಪಣಿಯಾಡಿಯಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ
ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಮೇ 4ರಂದು ಸಂಜೆ 6 ಗಂಟೆ ಗೋಧೂಳಿ ಶುಭ ಮುಹೂರ್ತದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ವೈಭವದ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
ಬೆಂಗಳೂರಿನ ಡಾ| ವಾದಿರಾಜ್ ನೇತೃತ್ವದ ಶ್ರೀನಿವಾಸ ಉತ್ಸವ ಬಳಗ ಕಲ್ಯಾಣ ಮಹೋತ್ಸವ ನಡೆಸಿಕೊಡಲಿದ್ದಾರೆ.
ಡಾ| ಬಿ. ಗೋಪಾಲಾಚಾರ್ಯರ ನಿರ್ವಹಣೆ, ಹಿನ್ನೆಲೆ ಗಾಯಕರಾಗಿ ಪ್ರಸಿದ್ಧ ಸಂಗೀತ ವಿದ್ವಾಂಸರಾದ ರಾಯಚೂರು ಶೇಷಗಿರಿದಾಸ ಮತ್ತು ಹರಿಚಂದನಾ ತಿರುಪತಿ ಭಾಗವಹಿಸುವರು.
ಅತ್ಯಂತ ಅಪೂರ್ವವಾದ ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಣಿಯಾಡಿ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ