ಉಡುಪಿ: ದೇಶಕ್ಕೆ ಕೋವಿಡ್ 19 ಸೋಂಕಿನ ಹಾವಳಿ ನಂತರ ಈ ಎರಡೂ ಅಲೆಗಳ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿವೆ. ಈ ಸಂದರ್ಭದಲ್ಲಿ ಆದ್ಯತೆಯ ಮೇರೆಗೆ ಸಾಕಷ್ಟು ಸೌಲಭ್ಯಗಳನ್ನು ಉಚಿತವಾಗಿ ಘೋಷಣೆ ಮಾಡಿ ಮಂಜೂರು ಮಾಡಿವೆ. ಆರೋಗ್ಯ ಇಲಾಖೆಯಲ್ಲೂ ಸಾಕಷ್ಟು ಸುಧಾರಣೆ ತಂದಿದ್ದು, ಇಂದು ಸರ್ಕಾರಿ ಆರೋಗ್ಯ ಸೇವೆಯ ಗುಣಮಟ್ಟ ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆ ನೀಡುವಷ್ಟು ಸುಧಾರಣೆ ಕಂಡಿದೆ. ಆದರೆ ನಿಸ್ವಾರ್ಥ ಮತ್ತು ಅಪಾಯಕಾರಿ ವಾತಾವರಣದಲ್ಲಿ ಮಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ವೈದ್ಯರು, ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಟೀಕೆ ಇತ್ಯಾದಿ ಸವಾಲಿನಲ್ಲೂ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯ ಸರ್ಕಾರಿ ಸೌಲಭ್ಯ ಮತ್ತು ಸರ್ಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂದು ಪರ್ಕಳ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಹೇಳಿದರು.
ಶುಕ್ರವಾರ ಪರ್ಕಳ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರದಲ್ಲಿ ನಡೆದ ಕೋವಿಡ್ ನಿಯಂತ್ರಣಾ ಪಡೆಯ ಸಭೆಯ ಬಳಿಕ ಕೇಂದ್ರಕ್ಕೆ ತಮ್ಮ ಸಹಕಾರ ಸಂಘದಿಂದ ಉಚಿತ ಔಷಧಗಳನ್ನು ಕೊಡುಗೆಯಾಗಿ ನೀಡಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಗೋಪಾಲ ಆಚಾರ್, ಚೇತನ ನಾಯಕ್, ಸುಖಾನಂದ, ರಮೇಶ್ ನಾಯಕ್ ಮಾಣಿಬೆಟ್ಟು, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಅಶ್ವಿನಿ ಅರುಣ್ ಪೂಜಾರಿ ಮತ್ತು ಮಂಜುನಾಥ್ ಮಣಿಪಾಲ, ವೈದ್ಯಾಧಿಕಾರಿ ನರಸಿಂಹ ನಾಯಕ್, ಅರೋಗ್ಯ ಸಹಾಯಕಿಯರಾದ ಹರಿಣಾಕ್ಷಿ ಮತ್ತು ದಾವಲಬಿ ರುಸ್ತುಮ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.