ಉಡುಪಿ: ಕೊರಗ ಸಮುದಾಯದ ಸಾಧಕರಿಗೆ ಗೌರವಾರ್ಪಣೆ ಹಾಗೂ ಅಗತ್ಯ ಪರಿಕರ ವಿತರಣೆ ಮೂಲಕ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ನೇತೃತ್ವದಲ್ಲಿ ಶನಿವಾರ ಇಲ್ಲಿನ ಬ್ರಹ್ಮಗಿರಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹುತಾತ್ಮ ದಿವಸ್ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಹಾತ್ಮ ಗಾಂಧಿಜಿಯವರ ತತ್ವಾದರ್ಶ ಮತ್ತು ನಾಯಕತ್ವ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ. ತನ್ನ ಸರಳತೆ, ಸತ್ಯನಿಷ್ಠೆ, ಅಹಿಂಸಾ ತತ್ವ ಮತ್ತು ಪ್ರಾಮಾಣಿಕತೆಯಿಂದ ವಿಶ್ವಕ್ಕೇ ಮಾದರಿ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದರು.
ಎಲ್ಲರೂ ಪ್ರೀತಿಸಬಹುದಾಗಿದ್ದ ವ್ಯಕ್ತಿತ್ವ, ಶಕ್ತಿ ಹೊಂದಿದ್ದ ಮಹಾತ್ಮಾ ಗಾಂಧಿ, ದೇಶದ ಭ್ರಾತೃತ್ವ ಮತ್ತು ಜಾತ್ಯತೀತ ಮೌಲ್ಯಗಳಿಗೆ ಪ್ರೇರಣೆಯಾಗಿದ್ದರು. ಶೋಷಿತರ ಪರವಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಪ್ರೀತಿಸುತ್ತಿದ್ದರು ಸಮಾಜದಲ್ಲಿ ಶೋಷಣೆ, ಅಸಮಾನತೆ ಹೋಗಲಾಡಿಬೇಕು ಎಂದು ಪಣತೊಟ್ಟ ಗಾಂಧಿ, ಆ ಮೂಲಕ ವಿಶ್ವದ ಎಲ್ಲಾ ರಾಷ್ಟ್ರಗಳು ಅವರನ್ನು ಗುರುತಿಸುವ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿ ನಡೆದು ತೋರಿಸಿಕೊಟ್ಟರು. ಸಮಾಜದಲ್ಲಿನ ಅಸ್ಪೃಶ್ಯತೆ ಹೊಗಲಾಡಿಸಿದಾಗ ಮಾತ್ರ ಅವರ ಪುಣ್ಯಸ್ಮರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಕೊರಗ ಸಮುದಾಯದ ಸಾಧಕರಾದ ಸುಕ್ರ ಕೊರಗ, ವಿನುತ, ಬಾಬು ಕೊರಗ ಮತ್ತು ಶ್ವೇತಾ ಅವರನ್ನು ಸನ್ಮಾನಿಸಲಾಯಿತು. 70 ಕೊರಗ ಕುಟುಂಬಗಳಿಗೆ ಮನೆಗೆ ಅಗತ್ಯವಿರುವ ಪರಿಕರ ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕನರ್ೇಲಿಯೊ, ಪಕ್ಷ ಪ್ರಮುಖರಾದ ನರಸಿಂಹಮೂರ್ತಿ, ಅಣ್ಣಯ್ಯ ಸೇರಿಗಾರ್, ಕುಶಲ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಸರಳಾ ಕಾಂಚನ್, ಗೀತಾ ವಾಗ್ಳೆ, ಬಾಲಕೃಷ್ಣ ಪೂಜಾರಿ, ಜನಾರ್ದನ ಭಂಡಾರ್ಕರ್, ನಾಗೇಶ್ ಉದ್ಯಾವರ, ಹರೀಶ್ ಕಿಣಿ, ಮೇರಿ ಡಿ’ಸೋಜಾ, ಪ್ರಮೀಳಾ ಜತ್ತನ್ನ, ಶಾಂತಿ ಪಿರೇರ, ಲೂಯಿಸ್ ಲೋಬೊ, ಕಿಶೋರ್ ಎರ್ಮಾಳ್, ಜ್ಯೋತಿ ಮೆನನ್, ಮೀನಾಕ್ಷಿ ಮಾಧವ, ಸರಸು ಬಂಗೇರ, ಸುರೇಶ್ ನಾಯ್ಕ್, ಪ್ರಭಾ ಶೆಟ್ಟಿ, ಜಯಶ್ರೀ, ಬಾನು ಭಾಸ್ಕರ್, ದಿನೇಶ್ ಕೋಟ್ಯಾನ್, ರೋಶನ್ ಬೆರೆಟ್ಟೋ, ಸತೀಶ್ ಜಪ್ತಿ, ವಾಣಿ ಆರ್. ಶೆಟ್ಟಿ, ಸೂರಿ ಸಾಲ್ಯಾನ್, ಸುರೇಶ್ ಮೆಂಡನ್, ಲಕ್ಷ್ಮೀನಾರಾಯಣ ಪ್ರಭು ಮೊದಲಾದವರಿದ್ದರು.
ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರಾ ಸ್ವಾಗತಿಸಿ, ಪ್ರಸ್ತಾವನೆಗೈದರು. ತಾ. ಪಂ. ಸದಸ್ಯೆ ಡಾ. ಸುನೀತಾ ಶೆಟ್ಟಿ ಹಾಗೂ ಅಮೃತಾ ನಿರೂಪಿಸಿದರು.