ಸುದ್ದಿಕಿರಣ ವರದಿ
ಭಾನುವಾರ, ಜುಲೈ 10
ಆಗುಂಬೆ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧ
ಉಡುಪಿ: ತೀರ್ಥಹಳ್ಳಿ- ಉಡುಪಿ ರಸ್ತೆಯ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜುಲೈ 30ರ ವರೆಗೆ ಎಲ್ಲಾ ವಿಧದ ಘನ ವಾಹನ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ನೀಡಿದ್ದಾರೆ.
ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ಪ್ರಮಾಣದ ಮಣ್ಣು ಹಾಗೂ ಸುಮಾರು 20 ಮರಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆಯಾದರೂ ರಸ್ತೆ ದುರಸ್ತಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಗುಂಬೆ ಘಾಟಿ ಮಾರ್ಗದಲ್ಲಿ ಲಘುವಾಹನ ಹೊರತುಪಡಿಸಿ ಮಿಕ್ಕೆಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಬದಲಿ ವ್ಯವಸ್ಥೆ
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಂಚರಿಸುವ ಬಸ್ ಗಳೂ ಸೇರಿದಂತೆ ಎಲ್ಲಾ ಘನವಾಹನಗಳು ಮಂಗಳೂರು, ಕಾರ್ಕಳ, ಶೃಂಗೇರಿ ಕೊಪ್ಪ ಹಾಗೂ ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸಲಿವೆ. ಹೆದ್ದಾರಿ 169 ಎಯಲ್ಲಿ ಸಂಚರಿಸುವ ವಾಹನಗಳು ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಕಾರ್ಕಳ ಮಂಗಳೂರು ಮಾರ್ಗದಲ್ಲಿ ಸಂಚರಿಸಲಿವೆ.
ಕುಂದಾಪುರ, ಮಾಸಿಕಟ್ಟೆ ಹಾಗೂ ತೀರ್ಥಹಳ್ಳಿ ಮಾರ್ಗದಲ್ಲೂ ಸಂಚರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.