ಕುಂದಾಪುರ, ಜು. 10, (ಸುದ್ದಿಕಿರಣ ವರದಿ): ಚಂಡಮಾರುತ, ಸುನಾಮಿಯಂತಹ ಪ್ರಾಕೃತಿಕ ವಿಕೋಪ ತಡೆ, ಮೀನುಗಳ ಸಂತಾನೋತ್ಪತ್ತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಾಂಡ್ಲಾವನ ಬೆಳೆಸುವುದು ಹಾಗೂ ಸಂರಕ್ಷಣೆ ಬಗ್ಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಇಲ್ಲಿನ ಪಂಚಗಂಗಾವಳಿ ಹಿನ್ನೀರು ಭಾಗದಲ್ಲಿರುವ ಕಾಂಡ್ಲಾವನ ವೀಕ್ಷಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸಲು ಅರಣ್ಯ ಇಲಾಖೆಯಿಂದ ಚಿಂತನೆ ನಡೆಸಲಾಗಿದೆ. ಕುಂದಾಪುರದ ಪ್ರಸಿದ್ಧ ಕಾಣೆ ಮೀನು ಈ ಪ್ರದೇಶದಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತದೆ ಎಂದರು.
ಬಂಡಿಪುರ ಸೇರಿದಂತೆ ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಪ್ರವಾಸ ನಿರ್ಬಂಧ ತೆರವುಗೊಳಿಸಲಾಗಿದೆ. ಆದರೆ, ದಟ್ಟಾರಣ್ಯ ಪ್ರದೇಶ ಪ್ರವಾಸಕ್ಕೆ ಅನುಮತಿ ಇಲ್ಲ. ಇಂದಿನ ಟೆಕ್ನಾಲಜಿ ಬಳಸಿಕೊಂಡು ವಿಡಿಯೋಗ್ರಫಿ ನಡೆಸಿ ಪ್ರವಾಸೋದ್ಯಮ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಟೂರಿಸಂ ಹೆಚ್ಚಿದಾಗ ಆದಾಯ ಬರಲಿದ್ದು ಅದೇ ಆದಾಯದಲ್ಲಿ ಕಾಂಡ್ಲಾವನ ಬೆಳೆಸಲಾಗುತ್ತದೆ. ಇನ್ನು ಕಡಲಾಮೆ ಸಂರಕ್ಷಣಾ ಕೇಂದ್ರ ತೆರೆಯುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಎರಡೂ ಕ್ಷೇತ್ರಗಳ ಶಾಸಕರ ಜೊತೆ ಚರ್ಷಿಸುವುದಾಗಿ ತಿಳಿಸಿದರು.
ಅದಕ್ಕೂ ಮೊದಲು ಕಾಂಡ್ಲಾವನ ಪರಿಚಯದ ಕಿರುಹೊತ್ತಗೆಯನ್ನು ಸಚಿವರು ಅನಾವರಣಗೊಳಿಸಿದರು.
ಬೋಟ್ ಮೂಲಕ ಕಾಂಡ್ಲಾವನವನ್ನು ಸಚಿವ ಲಿಂಬಾವಳಿ ಶಾಸಕರು ಮತ್ತು ಅಧಿಕಾರಿಗಳ ಜೊತೆ ವೀಕ್ಷಿಸಿದರು.
ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ. ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಳ್ಕರ್, ಕುಂದಾಪುರ ಉಪವಲಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ವಿಜಯ ಎಸ್. ಪೂಜಾರಿ, ಸುರೇಶ್ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಮೋಹನದಾಸ್ ಶೆಣೈ, ಸಂತೋಷ್ ಶೆಟ್ಟಿ, ಶ್ವೇತಾ, ದಿವಾಕರ ಕಡ್ಗಿಮನೆ, ಸುಧೀರ್ ಕೆ. ಎಸ್., ಸುರೇಂದ್ರ ಕಾಂಚನ್, ಅವಿನಾಶ್ ಉಳ್ತೂರು ಮೊದಲಾದರಿದ್ದರು