ಉಡುಪಿ: ಕೊರೊನಾ ಕಾರಣದಿಂದಾಗಿ ಉಂಟಾಗಿರುವ ಆಮ್ಲಜನಕ ಕೊರತೆ ನೀಗಿಸಲು ಕೈಕಾರಿಕಾ ಸಿಲಿಂಡರ್ ಗಳನ್ನು ಆಕ್ಸಿಜನ್ ಸಿಲಿಂಡರಾಗಿ ಮಾರ್ಪಡಿಸಲು ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದಾಸ್ತಾನಿಟ್ಟುಕೊಂಡಿರುವ ಕೈಗಾರಿಕಾ ಸಿಲಿಂಡರ್ ಗಳನ್ನು ಸರಬರಾಜುದಾರರಿಗೆ ಮರಳಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ಸೂಚಿಸಿದ್ದಾರೆ.
ಜನರ ಜೀವ ರಕ್ಷಣೆ ಪ್ರಥಮ ಆದ್ಯತೆಯಾಗಿದ್ದು ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ಆವಶ್ಯಕತೆ ತುಂಬಾ ಇದೆ. ಪ್ರಸ್ತುತ ಮೆಡಿಕಲ್ ಸಪ್ಲೈಗೆ ಆಕ್ಸಿನೇಟೆಡ್ ಸಿಲಿಂಡರ್ ಗಳ ಕೊರತೆ ಇದ್ದು, ಕೈಗಾರಿಕೆ ಸಿಲಿಂಡರ್ ಗಳನ್ನು ವೈದ್ಯಕೀಯ ಸಿಲಿಂಡರ್ ಗಳನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಸಿಲಿಂಡರ್ ಪಡೆದುಕೊಂಡು ತಮ್ಮ ವಶದಲ್ಲಿಟ್ಟುಕೊಂಡಿರುವ ಸಂಬಂಧಿಸಿದ ಎಲ್ಲಾ ಕಾರ್ಖಾನೆಗಳ ಮಾಲಿಕರು ಕೂಡಲೇ ತಮ್ಮ ಬಳಿ ಇಟ್ಟುಕೊಂಡಿರುವ ಕೈಗಾರಿಕಾ ಸಿಲಿಂಡರ್ ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಿ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ವ್ಯವಸ್ಥಿತ ಹಾಗೂ ಸುಗಮ ಪೂರೈಕೆಗೆ ಸಹಕಾರ ನೀಡಿ ಕೋವಿಡ್ ರೋಗಿಗಳ ಆರೈಕೆಗೆ ನೆರವಾಗುವಂತೆ ಡಿಸಿ ಮನವಿ ಮಾಡಿದ್ದಾರೆ