ಉಡುಪಿ: ನವೀಕರಣಗೊಳ್ಳುತ್ತಿರುವ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವರನ್ನು ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ಪೂರ್ವಭಾವಿಯಾಗಿ ಶಾರ್ವರಿ ಸಂವತ್ಸರ ಪೌಷ್ಯ ಪಂಚಮಿ ಸೋಮವಾರದಂದು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡಲಾಯಿತು.
ವೇ| ಮೂ| ಹಯವದನ ತಂತ್ರಿ ನೇತೃತ್ವದಲ್ಲಿ ಋತ್ವಿಜರು ಧಾರ್ಮಿಕ ವಿಧಿವಿಧಾನ ನಡೆಸಿದರು. ಶ್ರೀದೇವರ ಬಿಂಬವನ್ನು ಕಲಾಸಂಕೋಚಗೊಳಿಸಿ ಬಾಲಾಲಯದಲ್ಲಿ ಪ್ರತಿಷ್ಠೆ ಮಾಡಲಾಯಿತು.
ಅನಂತಪದ್ಮನಾಭನ ಸೇವೆ ಫಲಪ್ರದ
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಉಡುಪಿಯ ಪ್ರಾಚೀನ ದೇವಳಗಳಲ್ಲೊಂದಾದ ಅನಂತಪದ್ಮನಾಭಸ್ವಾಮಿ ದೇವಾಲಯದ ಜೀರ್ಣೋದ್ಧಾರದ ಸೌಭಾಗ್ಯ ಒದಗಿರುವುದು ಭಕ್ತರ ಸುಕೃತ ಫಲ ಎಂದು ಬಣ್ಣಿಸಿದರು.
ದೇವಸ್ಥಾನವನ್ನು ಸುಮಾರು ಐದೂವರೆ ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ಶಿಲಾಮಯ ದೇವಾಲಯವಾಗಿ ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಗಿದೆ.
ಪುತ್ತಿಗೆ ಮಠದ ಪ್ರಸನ್ನಾಚಾರ್ಯ, ನಾಗರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ವಿಶ್ವನಾಥ ಭಟ್ ಮತ್ತು ನಾರಾಯಣ ಮಡಿ ಮೊದಲಾದವರಿದ್ದರು.