ಕೆಜಿಎಫ್ ಬುದ್ಧ ಸಂಘದಲ್ಲಿ ಶಾಸಕಿಯಿಂದ ಸಂಘಾರಾಮ ನಿರ್ಮಾಣಕ್ಕೆ ಅಡಿಗಲ್ಲು
ಕೆಜಿಎಫ್: ನಗರದ ಗೌತಮ ನಗರದಲ್ಲಿರುವ ಮಹಾಬೋಧಿ ಅಶೋಕ ಧಮ್ಮ ಧೂತ ಬೌದ್ಧ ಸೊಸೈಟಿಯ ಆವರಣ ಶನಿವಾರ ಬೆಳಿಗ್ಗೆ ಅಪರೂಪದ ಧಾರ್ಮಿಕ ತೇಜಸ್ಸಿನಿಂದ ತುಂಬಿ ತುಳುಕಿತು. ಬೌದ್ಧ ಬಿಕ್ಕುಗಳ ಮೌನ ಪ್ರಾರ್ಥನೆ, ತಿಸರಣ, ಪಂಚಶೀಲಗಳ ಪಾವನ ಘೋಷಣೆ ಮತ್ತು ಉಪಾಸಕ, ಉಪಾಸಕಿಯರ ಶ್ರದ್ಧಾಭಾವದ ನಡುವೆ ಬೌದ್ಧ ಬಿಕ್ಕುಗಳ ನಿವಾಸ ನಿರ್ಮಾಣಕ್ಕೆ ಶಂಖುಸ್ಥಾಪನೆಯ ಶ್ರೇಷ್ಠ ಕ್ಷಣ ಸಾಕ್ಷಿಯಾದಿತು.
ಬೆಂಗಳೂರಿನ ಮಹಾಬೋಧಿ ಸೊಸೈಟಿಯಿಂದ ಆಗಮಿಸಿದ್ದ ಕಸಪ್ಪ ಮಹಾ ತೇರಾ ಬಂತೇಜಿ, ಆನಂದ ಬಂತೇಜಿ, ಸುಗತಾನಂದ ಬಂತೇಜಿ ಹಾಗೂ ಕೆಜಿಎಫ್ನ ಸ್ಥಾನಿಕ ಬಂತೇಜಿ ಕೇಮಿಂಡೋ ಅವರ ಸಾನ್ನಿಧ್ಯದಲ್ಲಿ ಮೊದಲು ತಿಸರಣ ಮತ್ತು ಪಂಚಶೀಲ ಬೋಧನೆಗಳು ನಡೆದವು. ನೂರಾರು ಉಪಾಸಕ, ಉಪಾಸಕಿಯರ ಮನಸ್ಸುಗಳಲ್ಲಿ ಶಾಂತಿ, ಸಮಾಧಾನ ಮತ್ತು ಮಾನವೀಯತೆಯ ದೀಪ ಬೆಳಗಿದಂತೆ ಕಂಡಿತು. ಬೌದ್ಧ ಧರ್ಮದ ವಿಧಿ ವಿಧಾನಗಳ ನಂತರ ಕೆಜಿಎಫ್ ಕ್ಷೇತ್ರದ ಶಾಸಕಿ ಹಾಗೂ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಡಾ. ರೂಪಕಲಾ ಅವರು ಭಕ್ತಿಭಾವದಿಂದ ಶಂಖುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾಬೋಧಿ ಅಶೋಕ ಧಮ್ಮ ಧೂತ ಸೊಸೈಟಿಯ ಅಧ್ಯಕ್ಷ ಡಾ. ಪೂರನೇಶನ್ ರಾಜು, ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಶಾಲಾ ಸಮೂಹಗಳ ಸ್ಥಾಪಕ ಅಧ್ಯಕ್ಷ ಡಾ. ಚಂದ್ರಶೇಖರ್, ಕೆಜಿಎಫ್ ಬುದ್ಧಸಂಘದ ಪದಾಧಿಕಾರಿಗಳು ಹಾಗೂ ಅನೇಕ ಉಪಾಸಕರು ಉಪಸ್ಥಿತರಿದ್ದರು.
ಇದಾದ ಬಳಿಕ ನಗರದ ಹೊರವಲಯದ ಭೀಮಗಾನಹಳ್ಳಿಯಲ್ಲಿ ಡಾ. ಚಂದ್ರಶೇಖರ್ ಅವರು ಬುದ್ಧ ವಿಹಾರ ನಿರ್ಮಾಣಕ್ಕಾಗಿ ದಾನ ಮಾಡಿರುವ ಸ್ಥಳದಲ್ಲಿ ಮತ್ತೊಂದು ಪಾವನ ಕ್ಷಣ ಉದಯಿಸಿತು. ಬಂತೇಜಿಗಳ ಸಮ್ಮುಖದಲ್ಲಿ ಶಾಸಕಿ ಡಾ. ರೂಪಕಲಾ ಅವರು ಬುದ್ಧ ವಿಹಾರ ನಿರ್ಮಾಣಕ್ಕೆ ಶಂಖುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ, “ಮನಸ್ಸಿನ ನೆಮ್ಮದಿಗೆ ಬುದ್ಧನ ಬೋಧನೆಗಳು ಅಮೂಲ್ಯ ದಾರಿ ದೀಪ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಂದಿನ ಅಶಾಂತ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡುತ್ತದೆ” ಎಂದು ಹೇಳಿದರು. ಗೌರವಾನ್ವಿತ ಬುದ್ಧ ಬಂತೇಜಿಗಳು ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಮೂಡಿಸುವ ಉದ್ದೇಶದಿಂದ ಬುದ್ಧನ ಬೋಧನೆಗಳನ್ನು ಸಮರ್ಪಕವಾಗಿ ಹಾಗೂ ಸಮರ್ಪಣಾಭಾವದಿಂದ ಹರಡುತ್ತಿರುವ ಈ ಪ್ರಯತ್ನ ಸ್ತುತ್ಯಾರ್ಹವೆಂದು ಶ್ಲಾಘಿಸಿದರು. ಈ ಎರಡೂ ಕಾರ್ಯಕ್ರಮಗಳು ಕೇವಲ ಕಟ್ಟಡಗಳ ಆರಂಭವಲ್ಲ, ಮಾನವೀಯತೆ, ಶಾಂತಿ ಮತ್ತು ಸಹೋದರತ್ವದ ಹೊಸ ಅಧ್ಯಾಯಕ್ಕೆ ಕೆಜಿಎಫ್ನಲ್ಲಿ ಬಿತ್ತಿದ ಆಶೆಯ ಬೀಜಗಳಾಗಿವೆ. ನೂರಾರು ಗ್ರಾಮಸ್ಥರು ಹಾಗೂ ಬುದ್ಧ ಸಂಘದ ಉಪಾಸಕ, ಉಪಾಸಕಿಯರು ಈ ಪಾವನ ಕ್ಷಣಗಳಿಗೆ ಸಾಕ್ಷಿಯಾದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
