ಸಾಹಿತ್ಯ ಧ್ವನಿಯಿಲ್ಲದವರಿಗೆ ಧ್ವನಿಯಾದಾಗ ಮಾತ್ರ ಸಾರ್ಥಕತೆ
ಬರಹಗಾರರು ತಾವು ಬರೆಯುವ ಕಾದಂಬರಿ-ಕಾವ್ಯ ಮೂಲಕ ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕು ಅಂದಾಗ ಮಾತ್ರ ಆ ಕೃತಿ ಸಮಾಜದಲ್ಲಿ ಮೌಲ್ಯ ಪಡೆದು ಹೊಸ ಪಲ್ಲಟಕ್ಕೆ ಕಾರಣವಾಗಬಲ್ಲದು ಎಂದು ರಂಗಕರ್ಮಿ, ನಿರ್ದೇಶಕ ಬಿ.ಸುರೇಶ್ ಹೇಳಿದರು
ಬೆಂಗಳೂರಿನ ವಿಜಯನಗರದಲ್ಲಿರುವ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಮುದ್ದಿ ಮೈಂಡ್ಸ್ ಆಯೋಜಿಸಿದ್ದ ಚಿದಾನಂದ ಮುದ್ದಿ ಅವರ ಚೊಚ್ಚಲ ಕಾದಂಬರಿ ‘ಸಪ್ತಕೋಟಿ’ ಲೋಕಾರ್ಪಣೆ ಮಾಡಿ ಮಾತನಾಡಿದ ಬಿ.ಸುರೇಶ್, ಸಮಾಜದಲ್ಲಿನ ಅಸಮಾನತೆ ವಿರುದ್ದ ಹೋರಾಡಲು ಬರವಣಿಗೆ ಮಾತ್ರ ಪ್ರಖರವಾದ ಅಸ್ತ್ರ. ಆ ನಿಟ್ಟಿನಲ್ಲಿ ಪತ್ರಕರ್ತ ಚಿದಾನಂದ ಮುದ್ದಿ ಕಾದಂಬರಿ ಮೂಲಕ ಸಮಾಜದಲ್ಲಿ ನಡೆಯುವ ಕೆಲವು ಸೂಕ್ಷ್ಮ ವಿಚಾರಗಳನ್ನು ಹೇಳಿ ಗಟ್ಟಿಯಾಗಿಯೇ ಸಾಹಿತ್ಯ ಅಂಗಳದಲ್ಲಿ ಹೆಜ್ಜೆ ಊರಿದ್ದಾರೆ. ಇಂದಿನ ಯುವಕರು ತಾವು ಸಮಾಜದಲ್ಲಿ ಕಂಡು, ಅನುಭವಿಸಿದ ಅಸಹಿಷ್ಣು ವಿಚಾರಗಳ ವಿರುದ್ದ ಧ್ವನಿ ಎತ್ತಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಬಿ.ಸುರೇಶ್ ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ ಬರಹಗಾರ ಜೋಗಿ ಅವರು ಹೊಸ ಬರಹಗಾರರು ತಮ್ಮ ಭಾಷಾ ಶೈಲಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು. ಹೇಳುವ ಕಥೆ - ಕಾದಂಬರಿಯಲ್ಲಿ ಸಾಹಿತ್ಯದ ಒಂದಿಷ್ಟು ಹಿಂದಿನ ಚೌಕಟ್ಟಗಳನ್ನು ಮೀರಿಯಾದರೂ ತಮ್ಮದೇ ಹೊಸ ಶೈಲಿ ಭಾಷೆ ರೂಡಿಸಿಕೊಂಡಾಗ ಮಾತ್ರ ಸಾಹಿತ್ಯ ಸಮೃದ್ದಿ ಆಗಲಿಕ್ಕೆ ಸಾಧ್ಯ ಎಂದು ಜೋಗಿ ಅಭಿಪ್ರಾಯಪಟ್ಟರು.
ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಚಿದಾನಂದ ಮುದ್ದಿ ಅವರ ಸಪ್ತಕೋಟಿ ಕಾದಂಬರಿ ಕೃತಿ ಪರಿಚಯ ಮಾಡಿ ಹೊಸ ಓದುಗರು ಹಾಗೂ ಯುವ ವಯಸ್ಸಿನ ಓದುಗರಿಗೆ ಈ ಕೃತಿ ಖಂಡಿತ ಇಷ್ಟವಾಗಬಲ್ಲಂತ ಕೃತಿ ಎಂದರು. ನಾಗರಾಜ್ ಅರೆಹೊಳೆ, ಲೇಖಕ ಚಿದಾನಂದ ಮುದ್ದಿ ವೇದಿಕೆಯಲ್ಲಿದ್ದರು. ರವೀಂದ್ರ ಮುದ್ದಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೈಥಲಿ ರಘುನಾಥ್ ಕಾರ್ಯಕ್ರಮ ನಿರೂಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
