ಭಗವಂತನ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲೂ ಕತ್ತಲೆ ದೂರವಾಗಿ ಬೆಳಕು ಮೂಡಲಿ : ಶ್ರೀ ನಂಜಾವಧೂತ ಸ್ವಾಮೀಜಿ
ಶಿರಾ: ಸತ್ಯ ಎಂದರೆ ಭಗವಂತ , ನಮ್ಮೆಲ್ಲರ ಜೀವನದಲ್ಲಿ ಸತ್ಯದ ಬೆಳಕನ್ನು ನೀಡಿ, ಬದುಕಿನ ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂಬ ಸಂಕಲ್ಪ ದೊಂದಿಗೆ ಭಕ್ತರು ದೀಪ ಹಚ್ಚಿದಾಗ ದೀಪದ ಬೆಳಕು ದೇವರಲ್ಲಿಗೆ ಪಸರಿಸಲಿ ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ದೇವರ ಆಜ್ಞೆ ಪಡೆದು ಒಳ್ಳೆಯದನ್ನೇ ಮಾಡುತ್ತೇನೆ ಎಂಬ ಸಂಕಲ್ಪದೊಂದಿಗೆ ಈ ಬ್ರಹ್ಮಾಂಡಕ್ಕೆ ಬಂದಿದ್ದೇವೆ, ನಾವು ದೇವರ ಇಚ್ಛೆಗೆ ವಿರುದ್ಧವಾಗಿ ನಡೆದು ಕೊಳ್ಳುತ್ತಿದ್ದು, ಸ್ವಾರ್ಥಿಗಳಾಗುತ್ತಿದ್ದೇವೆ.
ನಾನು ಎಂಬ ಪ್ರತಿಷ್ಠೆ ಅಹಂ ಬಿಟ್ಟು, ಎಲ್ಲರೊಳಗೆ ನಾನು ಒಬ್ಬ ಎಂಬ ಭಾವನೆಯೊಂದಿಗೆ ಜೀವನ ಕಟ್ಟಿಕೊಂಡಾಗ ಮನುಷ್ಯ ಜನ್ಮ ಸಾರ್ಥಕವಾಗಲಿದ್ದು, ದೇವರ ಕೃಪಾ ಆಶೀರ್ವಾದ ದೊರೆಯಲಿದೆ. ಶ್ರೀ ಓಂಕಾರೇಶ್ವರ ಸ್ವಾಮಿ ನಾಡಿನ ಅನ್ನದಾತ ಮತ್ತು ಜನಸಾಮಾನ್ಯರಿಗೆ ಸುಖ ಸಮೃದ್ಧಿ ಆರೋಗ್ಯ ಪೂರ್ಣ ಬದುಕನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕದ ಸಹಸ್ರರು ಭಕ್ತರು ಪಾಲ್ಗೊಂಡು, ದೀಪ ಹಚ್ಚುವ ಮೂಲಕ ಶ್ರೀ ಓಂಕಾರೇಶ್ವರ ಸ್ವಾಮಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಅರುಣೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಲಕ್ಕನಹಳ್ಳಿ ಮಂಜುನಾಥ್, ಶ್ರೀ ಮಠದ ತಮ್ಮಣ್ಣ, ನಿರಂಜನ್, ಮಹೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೀರ ಬೊಮ್ಮನಹಳ್ಳಿ ಗಂಗಾಧರ್ , ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಸ್ವಾಮಿ, ಮುಖಂಡ ನಾಗರಾಜು, ಮಂಜುನಾಥ ಗುಪ್ತ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
