ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಕೆ.ಜಿ.ಎಫ್., ಏ. ೧೯ :ಮುಂಜಾಗೃತ ಕ್ರಮವಾಗಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿಂದು ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ರೌಡಿ ಆಸಾಮಿಗಳ ಇರುವಿಕೆಯ ಬಗ್ಗೆ ಹಾಗೂ ಇವರುಗಳು ರೌಡಿ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕುರಿತು ಖುದ್ದು ಪರಿಶೀಲನೆ ಮಾಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ್ ಮತ್ತು ಡಿವೈಎಸ್ಪಿ ವಿ.ಲಕ್ಷ್ಮಯ್ಯ ಅವರ ನೇತೃತ್ವದಲ್ಲಿ ಭಾನುವಾರದಂದು ಮುಂಜಾನೆ ನಡೆದ ದಾಳಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಭಾನುವಾರದಂದು ಮುಂಜಾನೆ ಏಕಕಾಲದಲ್ಲಿ ರಾಬರ್ಟ್ಸನ್ಪೇಟೆ, ಆಂಡ್ರಸನ್ಪೇಟೆ, ಮತ್ತು ಉರಿಗಾಂ ಪೊಲೀಸ್ ಠಾಣಾ ಸರಹದ್ದುಗಳಲ್ಲಿನ ೧೦ ರೌಡಿ ಆಸಾಮಿಗಳ ಮನೆಗಳ ಮೇಲೆ ೦೫ ಪೊಲೀಸ್ ಇನ್ಸ್ಪೆಕ್ಟರ್, ೧೦ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ೬೦ ಮಂದಿ ಪೊಲೀಸ್ ಸಿಬ್ಬಂದಿಗಳಿದ್ದ ೫ ತಂಡಗಳವರು ದಾಳಿ ನಡೆಸಿದ್ದು, ರೌಡಿ ಆಸಾಮಿಗಳು ಇನ್ನೂ ರೌಡಿ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕುರಿತು ಪೊಲೀಸರು ಖುದ್ದು ಪರಿಶೀಲನೆ ನಡೆಸಿರುತ್ತಾರೆ. ದಾಳಿಯ ಸಮಯದಲ್ಲಿ ರೌಡಿ ಆಸಾಮಿಯಾದ ಜಯಕಾಂತ್ @ ಜಯಕುಮಾರ್ ಎಂಬ ಆಸಾಮಿಯ ಮನೆಯಲ್ಲಿ ೨ ಹರಿತವಾದ ಆಯುಧಗಳು ಪತ್ತೆಯಾಗಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ದ ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಮತ್ತು ಇನ್ನೋರ್ವ ರೌಡಿ ಆಸಾಮಿಯಾದ ಶರತ್ ಕುಮಾರ್ @ ದೊಡ್ಡ ಶರತ್ ರವರ ಮನೆಯಲ್ಲಿ ೧ ಹರಿತವಾದ ಆಯುಧ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಂಡು ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸದರಿ ರೌಡಿ ಆಸಾಮಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ರೌಡಿ ಆಸಾಮಿಗಳು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸದಂತೆ, ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುವಂತೆ, ಪೊಲೀಸರು ಮುಂಜಾಗೃತ ಕ್ರಮವಾಗಿ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ನಡೆಸಿ, ಖುದ್ದು ಪರಿಶೀಲನೆ ನಡೆಸಿದ್ದು, ಇನ್ನು ಮುಂದೆ ರೌಡಿ ಆಸಾಮಿಗಳು ಏನಾದರೂ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸುತ್ತಿರುವ ಕುರಿತು ಮಾಹಿತಿ ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಅವರು ಎಚ್ಚರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
