ಅರಿವಿನ ಜ್ಯೋತಿಯನ್ನು ಮನೆ ಮನೆಗೆ ಹಚ್ಚುವ ಕೆಲಸವಾಗಿದೆ; ತಾ.ಸಿ. ತಿಮ್ಮಯ್ಯ.
ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತಳ್ಳಿಯಲ್ಲಿರುವ ಧಮ್ಮಪ್ರಿಯ ಎಂ. ಗಿರಿಯಪ್ಪನವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ಮಾತನಾಡುತ್ತಾ ಪೂಜಾ ಮಂದಿರಗಳಿಗೆ, ಪೂಜೆಗೆ ಮನುಷ್ಯ ಕನೆಕ್ಟ್ ಆಗಿರುವಂತೆ ಓದುವ ಸಂಸ್ಕೃತಿಗೆ ಕನೆಕ್ಟ್ ಆಗಬೇಕಾಗಿದೆ. ಸಂಪ್ರದಾಯದ ಆಚರಣೆಯಂತೆ ಓದು ಕೂಡ ಒಂದು ಆಚರಣೆಯಾಗಬೇಕು. ಮನೆಗೊಂದು ಗ್ರಂಥಾಲಯ ಯೋಜನೆಯ ಬಿತ್ತನೆ ಮುಂದೆ ಅರಿವಿನ ಫಲ ಕೊಡುತ್ತದೆ. ಇದರಿಂದ ಮಾನವ ಸಂಸ್ಕೃತಿಯನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕವಿ ಹಾಗೂ ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ತಾ.ಸಿ. ತಿಮ್ಮಯ್ಯನವರು ಮನೆಗೊಂದು ಅಡುಗೆ ಮನೆ, ಮನೆಗೊಂದು ದೇವರ ಮನೆ ಇರುವಂತೆ ಮನೆಗೊಂದು ಗ್ರಂಥಾಲಯ ಪ್ರಮುಖವಾದದ್ದು. ಮನುಷ್ಯನಿಗೆ ದೈಹಿಕ ಆರೋಗ್ಯ ಹೇಗೆ ಮುಖ್ಯವೋ, ಮಾನಸಿಕ ಆರೋಗ್ಯವು ಮುಖ್ಯವಾದದ್ದು. ಮಾನಸಿಕ ಆರೋಗ್ಯಕ್ಕೆ ಅರಿವಿನ ಆಹಾರ ಬೇಕಾಗುತ್ತದೆ. ಇದನ್ನು ಪುಸ್ತಕಗಳು ಒದಗಿಸುತ್ತವೆ. ಜ್ಞಾನ ಮನುಷ್ಯನನ್ನು ಮಾನಸಿಕವಾಗಿ ಸಮತೋಲನದಲ್ಲಿರುವಂತೆ ಮಾಡುತ್ತದೆ. ಮೌಡ್ಯಗಳಿಂದ ಆಚೆ ಬರಲು ಸಾಧ್ಯವಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಪ್ರಸರಣಕ್ಕೆ ಇದೊಂದು ಉತ್ತಮ ಯೋಜನೆಯಾಗಿದೆ. ಮನೆಯಲ್ಲಿದ್ದ ಪುಸ್ತಕ ಒಂದಲ್ಲ ಒಂದು ದಿನ ಓದಿಸಿಕೊಳ್ಳುತ್ತದೆ. ಅರಿವಿನ ಜ್ಯೋತಿಯನ್ನು ಹಚ್ಚುವ ಕೆಲಸ ಇದಾಗಿದೆ ಎಂದು ಹೇಳಿದರು.
ದಮ್ಮಪ್ರಿಯ ಎಂ. ಗಿರಿಯಪ್ಪನವರು ಮಾತನಾಡಿ ಪುಸ್ತಕಗಳು ನೀಡುವ ಜ್ಞಾನಕ್ಕೆ ಎಲ್ಲೆ ಇಲ್ಲ. ಅಂಬೇಡ್ಕರ್ ಒಂದು ಉತ್ತಮ ಸಂವಿಧಾನ ರಚಿಸಲು ಪುಸ್ತಕಗಳಿಂದ ಪಡೆದ ಜ್ಞಾನವೇ ಮುಖ್ಯ. ಇದು ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಯಿತು. ಪುಸ್ತಕಗಳು ಒಬ್ಬ ಒಳ್ಳೆಯ ಸ್ನೇಹಿತನಿದ್ದಂತೆ. ಪುಸ್ತಕಗಳು ಅರಿವನ್ನು ಹೆಚ್ಚಿಸುವ ಮೂಲಕ ಕುಟುಂಬದಲ್ಲಿ ಸಮಾಜದಲ್ಲಿ ಒಳ್ಳೆಯ ನಾಗರಿಕತೆಯನ್ನುಂಟುಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಗಾಯಕರಾದ ಗುರುರಾಜ ಹೊಸಕೋಟೆಯವರು "ಒಳ್ಳೆಯ ದಾರಿಯಲ್ಲಿ ನಡೆಸು ಕಾರುಣ್ಯ ಸಿಂಧು" ಎಂದು ಪ್ರಾರ್ಥನೆಯನ್ನು ಮಾಡಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮತ್ತು ಕವಿಗಳಾದ ಉದಂತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಮತ್ತು ಲೇಖಕರಾದ ಡಾ. ಎಚ್.ತುಕಾರಾಂ. ಪ್ರಾಧಿಕಾರದ ಶ್ರೀನಿವಾಸ ಕರಿಯಣ್ಣ, ಸದಸ್ಯರಾದ ಎಚ್ ಜಯರಾಮಯ್ಯ, ವೀರಭದ್ರೇಗೌಡ ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
