ನವೋದಯ ಶಾಲೆಯಲ್ಲಿ ರಾಜ್ಯೋತ್ಸವದ ಸಂಭ್ರಮ
ವಕ್ಕಲೇರಿ: ಇಲ್ಲಿಗೆ ಸಮೀಪದ ನವೋದಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಮಕ್ಕಳಿಂದ ಹಚ್ಚೇವು ಕನ್ನಡದ ದೀಪ ಎಂಬ ಗಾಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಶಿಕ್ಷಕ ಪ್ರಕಾಶ್ ಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅವರು ಕನ್ನಡ ಭಾಷೆಯ ಇತಿಹಾಸ, ಅದರ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಇಂದಿನ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕನ್ನಡಕ್ಕೆ ಎದುರಾಗುತ್ತಿರುವ ಸವಾಲುಗಳ ಕುರಿತು ಚಿಂತನೀಯ ಮಾತುಗಳನ್ನಾಡಿದರು.
ಮಕ್ಕಳಿಂದ ಮನರಂಜನೀಯ ನಾಟಕ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ರಾಜ್ಯೋತ್ಸವದ ಅಂಗವಾಗಿ ಅಂಕಣಕಾರ ಎನ್. ಆರ್. ಪುರುಷೋತ್ತಮ ಹಾಗೂ ಮಾಲೂರಿನ ಖ್ಯಾತ ಸಾಹಿತಿ ನಾ. ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎನ್.ಆರ್. ಪುರುಷೋತ್ತಮ ಅವರು ಕನ್ನಡ ಭಾಷೆಯ ಸಮೃದ್ಧಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ, ಆದಿಕವಿ ಪಂಪನ, ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ, ಉಲ್ಲೇಖಿಸಿ ಅದೇ ರೀತಿ ಪ್ರತಿಯೊಬ್ಬರೂ ಕನ್ನಡನಾಡಿನ ಮೇಲಿನ ಅಭಿಮಾನ ಹೊಂದಿರಬೇಕು ಎಂದು ಕರೆ ನೀಡಿದರು. ರಾಜರತ್ನಂ ಹೇಳಿದಂತೆ, ಬಾಯ್ ಓಲ್ಸಾಕ್ಕುದ್ರುನೂವೆ ಮೂಗ್ನಲ್ ಕನ್ನಡ ಮಾತಾಡ್ತೀನಿ ಎಂಬ ಕನ್ನಡಾಭಿಮಾನ ಪ್ರತಿ ಕನ್ನಡಿಗನ ಹೃದಯದಲ್ಲೂ ಉರಿಯಬೇಕು. ಎಂದು ಹೇಳಿದರು.
ಸಾಹಿತಿ ನಾ. ರಾಮಮೂರ್ತಿ ಅವರು ಕನ್ನಡ ಭಾಷೆಯ ಇತಿಹಾಸ ಮತ್ತು ಅದರ ವಿಕಾಸಯಾತ್ರೆಯನ್ನು ಸ್ಪಷ್ಟವಾಗಿ ವಿವರಿಸಿದರು. ಉಪಪ್ರಾಚಾರ್ಯೆ ಆರ್. ಉಮಾ ಅವರು ನವೋದಯ ಶಾಲೆಯಲ್ಲಿ ಪ್ರತಿವರ್ಷ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮಕ್ಕಳು ಕನ್ನಡ ಸಂಸ್ಕೃತಿಯ ಅರಿವು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಶಿಕ್ಷಕಿ ರಾಧಾಬಾಯಿ ಸ್ವಾಗತಿಸಿದರು, ಶಿಕ್ಷಕ ವಿಶ್ವನಾಥ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಿಕ್ಷಕ ಶ್ರೀಕುಮಾರ್ ಸಿಂಹ ನಡೆಸಿದರು. ವಂದನಾರ್ಪಣೆಯನ್ನು ಸಂಜಯ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನವೋದಯ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ರಾಜ್ಯೋತ್ಸವದ ಸಂಭ್ರಮವನ್ನು ಕನ್ನಡ ಧ್ವಜದಡಿ ಹಂಚಿಕೊಂಡರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
