ಕೆಜಿಎಫ್,ಜು.೧೧: ವಿವಿದೆಡೆಗಳಲ್ಲಿ ಕುರಿಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂ.೪,೦೦,೦೦೦/-(ರೂಪಾಯಿ ನಾಲ್ಕು ಲಕ್ಷ ಮಾತ್ರ) ಮೌಲ್ಯದ ೨೦ ಕುರಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಒಂದು ಆಟೋವನ್ನು ವಶಪಡಿಸಿಕೊಳ್ಳುವಲ್ಲಿ ಬೂದಿಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂ.೨೧ ರಂದು ಯಳೇಸಂದ್ರ ಗ್ರಾಮದ ವಾಸಿ ಆನಂದ ಎಂಬುವರು ತಮ್ಮ ತೋಟದ ಶೆಡ್ನಲ್ಲಿರುವ ಕುರಿಗಳು ಕಳ್ಳತನವಾಗಿರುವ ಬಗ್ಗೆ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಬೂದಿಕೋಟೆ ಪ್ರಭಾರ ಪಿ.ಎಸ್.ಐ ಬಿ.ವಿ.ಕಿರಣ್ಕುಮಾರ್ ಮತ್ತು ತಂಡದವರು ಈ ಪ್ರಕರಣದಲ್ಲಿ ಆರೋಪಿಗಳಾದ ಬಂಗಾರಪೇಟೆ ವಾಸಿ ಹರೀಶ್, ಅಸ್ಸಾಂ ರಾಜ್ಯದ ವಾಸಿ ಹಪೀಜ್ ಅಹಮ್ಮದ್, ತ್ರಿಪುರ ರಾಜ್ಯದ ವಾಸಿ ಆಸಿಂ ದಾಸ್ ಹಾಗೂ ಅಸ್ಸಾಂ ರಾಜ್ಯದ ವಾಸಿ ಅಬ್ದುಲ್ ಕರಿಮ್ ರವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈಗಾಗಲೇ ಕುರಿಗಳನ್ನು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳಿಂದ ಬೂದಿಕೋಟೆ ಮತ್ತು ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳ್ಳತನ ಮಾಡಿದ್ದ ಸುಮಾರು ರೂ.೪,೦೦,೦೦೦/- ಮೌಲ್ಯದ ೨೦ ಕುರಿಗಳು ಹಾಗೂ ಕೃತ್ಯಕ್ಕೆ ಬಳಸಿದ ರೂ.೧೦,೦೦,೦೦೦/- ಮೌಲ್ಯದ ಮಾರುತಿ ಸುಜುಕಿ ಬ್ರೀಜಾ ಕಾರು ಮತ್ತು ರೂ.೨,೦೦,೦೦೦/- ಮೌಲ್ಯದ ಆಟೋವನ್ನು ವಶಪಡಿಸಿಕೊಂಡು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬೂದಿಕೋಟೆ ಪೊಲೀಸ್ ಠಾಣೆಯ ಪ್ರಭಾರ ಪಿ.ಎಸ್.ಐ ಬಿ.ವಿ.ಕಿರಣ್ಕುಮಾರ್ ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ರಾಮಕೃಷ್ಣರೆಡ್ಡಿ, ಮುನಾವರ್ ಪಾಷ, ಅಮರೇಶ್, ಸಿ.ಮಂಜುನಾಥ, ವಿ.ಮುನಿಕೃಷ್ಣಪ್ಪ ಮತ್ತು ಲಕ್ಷ್ಮಣತೇಲಿ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.
ಚಿತ್ರ ಶೀರ್ಷಿಕೆ: ೧೧ಕೆಜಿಎಫ್೦೧: ವಶಪಡಿಸಿಕೊಂಡ ಮಾಲಿನೊಂದಿಗೆ ಬೂದಿಕೋಟೆ ಪೊಲೀಸರ ತಂಡ