ಬೆಸ್ಕಾಂ ದಿವ್ಯ ನಿರ್ಲಕ್ಷ್ಯದಿಂದ ಅಪಾಯದ ನೆರಳಲ್ಲಿ ನಿಂತಿದೆ ಉರಿಗಾಂ ಪೊಲೀಸ್ ಠಾಣೆ ಪ್ರದೇಶ!
ಕೆಜಿಎಫ್: ನಗರದ ಹೃದಯಭಾಗದಲ್ಲೇ ಜೀವಹಾನಿಗೆ ಆಹ್ವಾನ ನೀಡುವಂತಹ ನಿರ್ಲಕ್ಷ್ಯ ! ಉರಿಗಾಂ ಪೊಲೀಸ್ ಠಾಣೆ ಮುಂಭಾಗದಲ್ಲೇ ಕೈಗೆ ತಾಕುವ ಎತ್ತರದಲ್ಲಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪ್ರವರ್ತಕವನ್ನು ಅಳವಡಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಗರದ ಒಂದು ಕಾಲೋನಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಜಾತ್ರೆ ಮಹೋತ್ಸವ ಸಂದರ್ಭದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆದ ಸಂದರ್ಭದಲ್ಲಿ 11 ಕೆವಿ ಹೈಟೆನ್ಶನ್ ತಂತಿಗೆ ತಗುಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆಯಿತು. ಆ ಘಟನೆಯ ಚಿಹ್ನೆ ಮಾಸುವ ಮುನ್ನವೇ ಮತ್ತೊಂದು ಅಪಾಯ ನಗರದಲ್ಲಿ ತಲೆದೋರಿದೆ. ಉರಿಗಾಂ ಪೊಲೀಸ್ ಠಾಣೆಯ ಮುಂದೆ ಅಳವಡಿಸಿರುವ ಪ್ರವರ್ತಕ ಕೈಗೆ ತಾಕುವಷ್ಟು ಎತ್ತರದಲ್ಲಿದ್ದು, ಯಾರಾದರೂ ಅಜಾಗರೂಕತೆಯಿಂದ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲೇ ಮತ್ತೊಂದು ದುರಂತ ಖಚಿತ.
ಸರ್ಕಲ್ ಇನ್ಸ್ಪೆಕ್ಟರ್ ಮಾರ್ಕಂಡಯ್ಯ ಅವರು ಈ ಅಪಾಯಕಾರಿ ಪರಿಸ್ಥಿತಿ ಕುರಿತು ಬೆಸ್ಕಾಂ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಸ್ವತಃ ಮಾಹಿತಿ ನೀಡಿದ್ದರೂ, ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖಂಡನೀಯ. ಜನರ ಜೀವ ಹಾನಿಯಾದ ನಂತರ ಮಾತ್ರ ಕಣ್ಣು ತೆರೆಯುವವರಾಗಿದ್ದರೆ, ಇಂತಹ ಅಧಿಕಾರಿಗಳು ಜನರ ಸೇವೆಗೆ ಯೋಗ್ಯರಲ್ಲ, ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ಮಧ್ಯದಲ್ಲೇ ಇಷ್ಟು ದೊಡ್ಡ ಅಪಾಯ ಕಣ್ಮುಚ್ಚಿ ನಿಂತಿದೆ, ಆದರೆ ಅಧಿಕಾರಿಗಳ ಕಣ್ಣು ತೆರೆಯದೆದಿರುವುದು ವಿಷಾದನೀಯ, ಎಂದು ಹೇಳಿದ್ದಾರೆ. ಸಾರ್ವಜನಿಕ ಸುರಕ್ಷತೆಯ ವಿಷಯದಲ್ಲಿ ಬೆಸ್ಕಾಂ ಅಧಿಕಾರಿಗಳ ಈ ರೀತಿಯ ಬೇಜವಾಬ್ದಾರಿತನದಿಂದ ಮತ್ತೊಂದು ಅನಾಹುತ ಸಂಭವಿಸಿದರೆ, ಅದರ ಸಂಪೂರ್ಣ ಜವಾಬ್ದಾರಿತನ ಬೆಸ್ಕಾಂ ಮೇಲೆಯೇ ಇರಲಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ
ಜನರ ಜೀವದ ಹಂಗಿಗೆ ಕಣ್ಣು ಮುಚ್ಚಿರುವ ಬೆಸ್ಕಾಂನಿಂದ ಅಪಾಯದ ನೆರಳಲ್ಲಿ ನಿಂತಿದೆ ಉರಿಗಾಂ ಪೊಲೀಸ್ ಠಾಣೆ ಪ್ರದೇಶ!
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
